ADVERTISEMENT

`ಕೋರ್ಟ್‌ನಲ್ಲಿ ಕಕ್ಷಿದಾರರಿಗೆ ಮೂಲಸೌಕರ್ಯ ಅವಶ್ಯ'

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 6:29 IST
Last Updated 9 ಜುಲೈ 2013, 6:29 IST

ದೊಡ್ಡಬಳ್ಳಾಪುರ: ನ್ಯಾಯಾಲಯಕ್ಕೆ ಪ್ರತಿ ದಿನ ಬರುವ ಕಕ್ಷಿದಾರರು ಹಾಗೂ ವಕೀಲರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸೂಕ್ತ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಯುವ ವಕೀಲ ರವಿ ಮಾವಿನಕುಂಟೆ ಶಾಸಕರಲ್ಲಿ ಮನವಿ ಮಾಡಿದರು.

ತಾಲ್ಲೂಕು ವಕೀಲರ ಸಂಘದ ವತಿಯಿಂದ ನಗರದ ನ್ಯಾಯಾಲಯ ಆವರಣದಲ್ಲಿನ ಸಂಘದ ಕಚೇರಿಯಲ್ಲಿ ನೂತನ ಶಾಸಕರನ್ನು ಅಭಿನಂದಿಸಿ ಅವರು ಮಾತನಾಡಿದರು.  

`ಇತ್ತೀಚಿನ ದಿನಗಳಲ್ಲಿ ಯುವ ವಕೀಲರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಕಚೇರಿಯಲ್ಲಿ ವಕೀಲರಿಗಾಗಿ ಗ್ರಂಥಾಲಯ ಸ್ಥಾಪನೆ ಅಗತ್ಯವಾಗಿದೆ. ಶಾಸಕರು ತಮ್ಮ ಅನುದಾನದಲ್ಲಿ ಗ್ರಂಥಾಲಯಕ್ಕೆ ಸಹಕಾರ ನೀಡಬೇಕು' ಎಂದು ಅವರು ಮನವಿ ಮಾಡಿದರು.

ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, `ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜಿ ಸಂಧಾನದ ಮೂಲಕ ಎರಡು ಸಾವಿರ ವಿವಾದಗಳನ್ನು ಇತ್ಯರ್ಥಗೊಳಿಸಲಾಗಿದೆ. ಅಲ್ಲದೆ ಪ್ರತಿ ಹೋಬಳಿಯಲ್ಲೂ ಕಾನೂನು ರಥ ಯಾತ್ರೆ ಮೂಲಕ ಜನ ಸಾಮಾನ್ಯರಿಗೆ ದಿನನಿತ್ಯ ಅಗತ್ಯ ಇರುವ ಕಾನೂನಿನ ಅರಿವು ಮೂಡಿಸಲಾಗಿದೆ' ಎಂದು ಅವರು ಹೇಳಿದರು.

ವಕೀಲರ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, `ಗ್ರಂಥಾಲಯ ಹಾಗೂ ನ್ಯಾಯಾಲಯ ಆವರಣದಲ್ಲಿ ಅಗತ್ಯ ಇರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ವಕೀಲರ ಸಹಕಾರ, ಸಲಹೆಗಳು ಅಗತ್ಯ' ಎಂದು ಹೇಳಿದರು.

ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ  ಬಿ.ಸಿ.ಜನಾರ್ಧನ್, ಕಾರ್ಯದರ್ಶಿ ಬಿ.ಎಂ.ಬೈರೇಗೌಡ, ಖಜಾಂಚಿ ಡಿ.ಎಂ.ರೇಣುಕಾ ಮೂರ್ತಿ, ಜಂಟಿ ಕಾರ್ಯದರ್ಶಿ ಎ.ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.