ADVERTISEMENT

ಖಾದಿ ಗ್ರಾಮೋದ್ಯೋಗದ ಸೌಲಭ್ಯ ಪಡೆಯಿರಿ

ಬ್ಯಾಂಕ್‌ಗಳಿಗೆ ಬರುವ ಎಲ್ಲಾ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:40 IST
Last Updated 30 ನವೆಂಬರ್ 2017, 9:40 IST
ಎಚ್.ಲಕ್ಷ್ಮೀ ಅವರು ಆಲಿಯಾ ಖಾಟೂನ್ ಅವರೊಂದಿಗೆ ಚರ್ಚೆ ನಡೆಸಿದರು.
ಎಚ್.ಲಕ್ಷ್ಮೀ ಅವರು ಆಲಿಯಾ ಖಾಟೂನ್ ಅವರೊಂದಿಗೆ ಚರ್ಚೆ ನಡೆಸಿದರು.   

ವಿಜಯಪುರ: ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಸಿಗುವಂತ ಎಲ್ಲಾ ಸೌಲಭ್ಯಗಳನ್ನು ನಿರುದ್ಯೋಗಿ ಯುವಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿ ಎಚ್.ಲಕ್ಷ್ಮೀ ಹೇಳಿದರು.

ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಷನ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಸೇರಿದಂತೆ ಹಲವಾರು ಬ್ಯಾಂಕುಗಳಿಗೆ ಭೇಟಿ ನೀಡಿದ್ದ ಅವರು ಕೆವಿಐಬಿ ಯೋಜನೆಯಡಿ ಬ್ಯಾಂಕುಗಳಿಗೆ ಬರುವಂತ ಎಲ್ಲಾ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು.

ನಿರುದ್ಯೋಗಿ ಯುವಕ, ಯುವತಿಯರು, ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸ್ವಂತ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶಗಳಿದ್ದು, 8 ನೇ ತರಗತಿಯಿಂದ ಪದವಿವರೆಗೂ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಸಿಗದೇ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವಂತ ಯುವಜನರು ಇಂಥ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನದ ಕಡೆಗೆ ಗಮನ ಹರಿಸಬೇಕು ಎಂದರು.

ADVERTISEMENT

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಜಯಪುರ ಶಾಖೆಯ ವ್ಯವಸ್ಥಾಪಕಿ ಆಲಿಯಾ ಖಾಟೂನ್ ಮಾತನಾಡಿ, ಬ್ಯಾಂಕುಗಳಿಗೆ ಸಾಲ ಕೊಡುವಂತೆ ಅನೇಕ ಅರ್ಜಿಗಳು ಶಿಫಾರಸಾಗಿ ಬರುತ್ತವೆ. ಬಹಳಷ್ಟು ಮಂದಿ ಫಲಾನುಭವಿಗಳು ಯಾವ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿರುತ್ತಾರೋ ಅದರ ಬಗ್ಗೆ ಅವರಿಗೆ ಅನುಭವ ಇರುವುದಿಲ್ಲ. ₹ 25 ಲಕ್ಷದವರೆಗೂ ಸಾಲ ಕೇಳುತ್ತಾರೆ. ಅಂತಹ ಸಂದರ್ಭದಲ್ಲಿ ಸಾಲ ನೀಡಲು ಅವಕಾಶವಿರುವುದಿಲ್ಲ ಎಂದರು.

ಬಹಳಷ್ಟು ಮಂದಿ ಸಾಲ ತೆಗೆದುಕೊಂಡು ಮರುಪಾವತಿ ಮಾಡುತ್ತಿಲ್ಲ. ಆದ್ದರಿಂದ ಅರ್ಹ ಫಲಾನುಭವಿ ಆಗಿರಬೇಕು. ಬ್ಯಾಂಕಿನಲ್ಲಿ ಆರು ತಿಂಗಳ ಹಿಂದೆ ಖಾತೆ ತೆರೆದು ಸರಿಯಾಗಿ ವ್ಯವಹರಿಸುತ್ತಿರುವ ಗ್ರಾಹಕರಾಗಿರಬೇಕು. ಅವರ ಕುಟುಂಬಗಳಲ್ಲಿನ ಯಾವ ಫಲಾನುಭವಿಗಳೂ ಸುಸ್ತಿದಾರರಾಗಿರಬಾರದು. ಅಂತಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಅಭ್ಯಂತರವಿಲ್ಲ ಎಂದು ಹೇಳಿದರು.

ಅಧಿಕಾರಿ ರಾಮಾಂಜಿನಪ್ಪ, ಮುಖಂಡ ಎಂ.ನಾರಾಯಣಸ್ವಾಮಿ, ಚಂದೇನಹಳ್ಳಿ ಮುನಿಯಪ್ಪ, ಲೋಕೇಶ್, ನಾರಾಯಣಸ್ವಾಮಿ, ಮುನಿಆಂಜಿನಪ್ಪ ಇದ್ದರು.

116 ಬಗೆಯ ಗುಡಿಕೈಗಾರಿಕೆ
ಈ ಮಂಡಳಿಯಿಂದ 116 ಬಗೆಯ ಗುಡಿಕೈಗಾರಿಕೆಗಳಿಗೆ ಸಾಲ ಸೌಲಭ್ಯವಿದೆ. ಮಂಡಳಿ ಸಾಲದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 35 ರಷ್ಟು ಸಬ್ಸಿಡಿ, ಸಾಮಾನ್ಯ ವರ್ಗಕ್ಕೆ ಶೇ 25 ರಷ್ಟು ಸಬ್ಸಿಡಿ ನೀಡುತ್ತದೆ ಎಂದು ಮಂಡಳಿಯ ಜಿಲ್ಲಾ ಅಧಿಕಾರಿ ಎಚ್.ಲಕ್ಷ್ಮೀ ಹೇಳುತ್ತಾರೆ.

‘ಮಂಡಳಿಯಿಂದ ನಾವು ನೇರವಾಗಿ ಸಾಲ ಕೊಡುವ ಅಧಿಕಾರವಿಲ್ಲ. ನಾವು ಏನಿದ್ದರೂ ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಸಬ್ಸಿಡಿ ಮಾತ್ರ ಒದಗಿಸಿಕೊಡಬಹುದು. ಮಂಡಳಿಯ ಸಾಲ ಸೌಲಭ್ಯಕ್ಕಾಗಿ ಮಂಡಳಿಯ ಜಾಲತಾಣದ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಜಿಲ್ಲಾಮಟ್ಟದಲ್ಲಿರುವ ಟಾಸ್ಕ್‌ಫೋರ್ಸ್‌ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.