ADVERTISEMENT

ಗುಮ್ಮಳಾಪುರದಲ್ಲಿ ಸಡಗರದ ಗೌರಮ್ಮನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 4:45 IST
Last Updated 19 ಅಕ್ಟೋಬರ್ 2012, 4:45 IST

ಆನೇಕಲ್: ಸಮೀಪದ ತಮಿಳುನಾಡಿನ ಗುಮ್ಮಳಾಪುರದಲ್ಲಿ ಗೌರಮ್ಮ ದೇವಿ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮ ಸಡಗರಗಳಿಂದ ನೆರವೇರಿತು. ಜಾತ್ರೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಜನರು ಪಾಲ್ಗೊಂಡು ಜಾತ್ರೆಯ ಸಂಭ್ರಮಕ್ಕೆ ಸಾಕ್ಷಿಯಾದರು.

ಸಂಜೆ 5 ಗಂಟೆ ವೇಳೆಗೆ ಗೌರಮ್ಮನ ಗುಡಿಯಿಂದ ನಂದಿ ಧ್ವಜದೊಂದಿಗೆ ಹಾಗೂ ಮಂಗಳ ವಾದ್ಯಗಳೊಂದಿಗೆ ಗಣೇಶ ಹಾಗೂ ಗೌರಿ ದೇವಿಯ ಮೂರ್ತಿಗಳನ್ನು ತೇರುಗಳಲ್ಲಿ ಕುಳ್ಳಿರಿಸಲಾಯಿತು. ಬಿದಿರಿನ ಮರಗಳಿಂದ ಮಾಡಲಾಗಿದ್ದ ಉದ್ದನೆಯ ತೇರಿನಲ್ಲಿ ಗಣೇಶ ಹಾಗೂ ದೇವಿಯನ್ನು ಕುಳ್ಳಿರಿಸಿ ಪೂಜಿಸಿದ ನಂತರ ತೇರುಗಳು ದೇವಾಲಯದಿಂದ ಸಾಗಿದವು.
 
ಅಲ್ಲಿಂದ ಗುಮ್ಮಳಾಪುರ ಹಿರೇಮಠಕ್ಕೆ ಬಂದು ಗೌರಿ ದೇವಿ ತವರಿನ ಮಡಿಲಕ್ಕಿ ಸ್ವೀಕರಿಸಿದ ನಂತರ ಗೌರಿ ಹಾಗೂ ಗಣೇಶನ ತೇರುಗಳು 3 ಕಿ.ಮೀ. ದೂರದ ಕೆರೆಯತ್ತ ಸಾಗಿದವು. ಬಿದಿರಿನ ಮರದ ಈ ತೇರುಗಳನ್ನು ಜನರು ಹೊತ್ತು ಹೊಲ, ಗದ್ದೆಗಳೆನ್ನದೆ ಎಲ್ಲೆಡೆ ನುಗ್ಗಿ ವೇಗವಾಗಿ ಸಾಗುತ್ತಿದ್ದ ದೃಶ್ಯ ರೋಮಾಂಚಕವಾಗಿತ್ತು.

ಹಿರೇಮಠದಲ್ಲಿ ಭಕ್ತರು ಬೆಳಿಗ್ಗೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀರಭದ್ರಸ್ವಾಮಿಯ ದರ್ಶನ ಪಡೆದರು.

ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ಕಾರ್ಯಗಳೂ ಸಾಂಗವಾಗಿ ನೆರವೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.