ADVERTISEMENT

ಟ್ರ್ಯಾಕ್ಟರ್‌, ಮೋಟಾರ್‌ ವಶ

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 9:52 IST
Last Updated 21 ಸೆಪ್ಟೆಂಬರ್ 2013, 9:52 IST

ದೇವನಹಳ್ಳಿ: ತಾಲ್ಲೂಕಿನ ಮುದ್ದನಾಯ ಕನಹಳ್ಳಿ ಸುತ್ತಮುತ್ತ ನಡೆಸುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆಗಳ ಮೇಲೆ ತಹಶೀಲ್ದಾರ್‌ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳ ತಂಡವು ಶುಕ್ರವಾರ ದಾಳಿ ನಡೆಸಿ ಒಂದು ಟ್ರ್ಯಾಕ್ಟರ್‌ ಮತ್ತು ಮೋಟಾರ್‌ ವಶ ಪಡಿಸಿಕೊಂಡಿತು.

ದಾಳಿ  ನಡೆದ ನಂತರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ಜಾಗವಿರಲಿ, ಪಿತ್ರಾರ್ಜಿತ ಭೂಮಿ ಇರಲಿ ಅಕ್ರಮ ಮರಳುಸ ಸಾಗಣೆ ಮಾಡುವುದು ಕಾನೂನು ದೃಷ್ಟಿಯಲ್ಲಿ ಅಪರಾಧ. ಸರ್ಕಾರ ಈ ಬಗ್ಗೆ ಕಠಿಣ ಕಾನೂನು ರೂಪಿಸಲು ಮುಂದಾಗಿದೆ’ ಎಂದರು.

‘ಅಕ್ರಮ ಮರಳು ಅಥವಾ ಗಣಿ ಗಾರಿಕೆಗೆ ತಾಲ್ಲೂಕಿನಲ್ಲಿ ಎಲ್ಲಿಯೂ ಅವ ಕಾಶ ನೀಡಿಲ್ಲ. ನಾನು ತಾಲ್ಲೂಕಿಗೆ ಬಂದು ಕರ್ತವ್ಯಕ್ಕೆ ಹಾಜರಾದ ದಿನದಿಂದ ಈ ವರೆವಿಗೂ ಹನ್ನೆರಡು ಬಾರಿ ಇಂತಹ ಸ್ಥಳಗಳ ಮೇಲೆ ದಾಳಿ ನಡೆಸಿ ಮೂವ ತ್ತಕ್ಕೂ ಹೆಚ್ಚು ಪಂಪ್‌ ಮೋಟಾರ್‌, ಇತರೆ ಪರಿಕರ ಹಾಗೂ ಇಪ್ಪತ್ತೆಂಟು ಟ್ರ್ಯಾಕ್ಟರ್‌, ಎಂಟು ಲಾರಿ, ಆರು ಜೆ.ಸಿ.ಬಿ ಯಂತ್ರ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವ ರಿಸಿದರು.

ದಾಳಿ ನಡೆದ ಸ್ಥಳದಲ್ಲಿ ಒಂದೆಡೆ ಮರಳುಗಳ ರಾಶಿ ಮತ್ತೊಂದೆಡೆ ಮರಳು ತುಂಬಿಕೊಂಡು ಹೋಗಿರುವ ವಾಹನಗಳ ಗುರುತು ಹಾಗೂ ಸರ್ಕಾರಿ ಜಾಗದಲ್ಲೇ ನಿರ್ಮಾಣ ಮಾಡಿ ಕೊಂಡಿರುವ ಈ ಅಕ್ರಮ ಅಡ್ಡೆಗಳನ್ನು ನೋಡಿದ ತಹಶೀಲ್ದಾರ್‌ ಡಾ.ಎನ್‌.ಸಿ. ವೆಂಕಟರಾಜು ಒಂದು ಕ್ಷಣ ದಂಗಾಗಿ ಹೋದರು.

ನಂತರ ಅಲ್ಲೇ ಇದ್ದ ಕೆಲವು ಸ್ಥಳಿಯರನ್ನು ಪ್ರಶ್ನಿಸಿ ಯಾರು ಈ ದಂದೆ ಯಲ್ಲಿ ತೊಡಗಿಸಿಕೊಂಡಿದ್ದಾರೆ ಹೆಸರು ಹೇಳಿ ಎಂದರೂ ಯಾರೂ ಕೂಡಾ ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸದೆ ಅಚ್ಚರಿ ಹುಟ್ಟಿಸಿದರು.
ತಾಲ್ಲೂಕಿನಲ್ಲಿ ಎಲ್ಲೆಯೇ ಆಗಲೀ ಅಕ್ರಮ ಮರಳು ಅಡ್ಡೆ ನಡೆಸುತ್ತಿದ್ದಲ್ಲಿ ನೇರವಾಗಿ ಸಂಪರ್ಕಿಸಿ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಉಪ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಮಾತನಾಡಿ, ಮರಳು ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಮುನಿ ರಾಜು ಹಾಗೂ ಟ್ರ್ಯಾಕ್ಟರ್‌ ಮಾಲಿಕ ಮುನಿರಾಜು ಸೇರಿದಂತೆ ಮುದ್ದ ನಾಯಕನಹಳ್ಳಿ ವ್ಯಾಪ್ತಿ ಯಲ್ಲಿ ಎಂಟು, ಮಾಯಸಂದ್ರದಲ್ಲಿ ನಾಲ್ಕು, ತೈಲಗೆರೆ ಸೇರಿದಂತೆ ಇತರೆಡೆ ಐದು ಪ್ರಕರಣದಲ್ಲಿ ಒಟ್ಟು ಹದಿನಾರು ಮಂದಿಯ ಮೇಲೆ ದೂರುಗಳುಬಂದಿದ್ದು ಎಫ್‌.ಐ.ಆರ್‌ ದಾಖಲಿಸಲಾಗಿದೆ ಎಂದು ವಿವರಿಸಿದರು.

ಮುದ್ದನಾಯಕನಹಳ್ಳಿ ಗ್ರಾಮದ ರಮೇಶ ತಹಶೀಲ್ದಾರ್‌ಗೆ ಮಾಹಿತಿ ನೀಡಿ, ‘ಈ ಸ್ಥಳದಲ್ಲಿ ಬಿದಲೂರಿನ ಮುನಿ ರಾಜು ಹಲವಾರು ತಿಂಗಳಿನಿಂದ ಅಕ್ರಮ ಮರಳು ದಂದೆ ನಡೆಸುತ್ತಿದ್ದಾರೆ. ಈ ಬಗ್ಗೆ ಡಿ.ವೈ.ಎಸ್‌.ಪಿಗೆ ದೂರು ನೀಡಲಾಗಿತು್ತ ಆದರೆ ಮರಳು ಅಕ್ರಮ ಸಾಗಣೆ ನಿಂತಿಲ್ಲ. ಈ ಚಟುವಟಿಕೆಗಳನ್ನು ನಡೆಸುವವರ ಹಿಂದೆ ಸ್ಥಳೀಯ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಬೆಂಬಲವಿದೆ’ ಎಂದು ಆರೋಪಿಸಿದರು.

‘ಈಗಾಗಲೇ ಈ ಕುರಿತು ಲೋಕಾ ಯುಕ್ತರ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಿದ್ದೇನೆ. ಆದರೂ ಪ್ರಯೋಜನ ವಾಗಿಲ್ಲ‘ ಎಂದು ಅಲವತ್ತು ಕೊಂಡರು.

‘ಇರುವ ಒಂದು ಎಕರೆ ಭೂಮಿಯಲ್ಲಿ ಅಕ್ರಮ ಮರಳು ನೀರಿನ ತ್ಯಾಜ್ಯದಿಂದ ಬೆಳೆ ನಾಶವಾಗಿದೆ, ಮರಳು ದಂಧೆ ಕೋರರಿಂದ ನನಗೆ ಜೀವ ಬೆದರಿಕೆ ಇದೆ. ಸತತ ನಾಲ್ಕು ವರ್ಷದಿಂದ ಅಕ್ರಮ ಮರಳು ನಡೆಯುತ್ತಿದೆ. ನನ್ನ ಪ್ರಾಣ ಹೋದರೂ ಸರಿಯೇ ಇಲ್ಲಿಮ ಅಕ್ರಮ ಮರಳುದಂದೆ ನಿಲ್ಲಬೇಕು, ಪೋಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಠಾಣೆ ಮುಂದೆ ಕುಟುಂಬ ಸಮೇತ ಬಿಡಾರ ಹೂಡುತ್ತೇನೆ’ ಎಂದು ಎಚ್ಚರಿಸಿದರು.

ದಾಳಿ ನಡೆಸಿದ ತಂಡದಲ್ಲಿ ಕಂದಾಯ ನಿರೀಕ್ಷಕ ಮಹೇಶ್‌ ಕುಮಾರ್‌, ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಸ್ವಾಮಿ, ವೆಂಕಟೇಶ್‌, ಸುದರ್ಶನ್‌, ಭೈರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.