ADVERTISEMENT

ದೊಡ್ಡಬಳ್ಳಾಪುರ: ಸಂಚಾರಿ ಹೊರಠಾಣೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ದೊಡ್ಡಬಳ್ಳಾಪುರ: ಸಂಚಾರಿ ಹೊರಠಾಣೆ ಉದ್ಘಾಟನೆ
ದೊಡ್ಡಬಳ್ಳಾಪುರ: ಸಂಚಾರಿ ಹೊರಠಾಣೆ ಉದ್ಘಾಟನೆ   

ದೊಡ್ಡಬಳ್ಳಾಪುರ: ನಗರದ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಸಂಚಾರಿ ಹೊರ ಪೊಲೀಸ್ ಠಾಣೆಯನ್ನು ಡಿವೈಎಸ್‌ಪಿ ಶ್ರೀಧರ್  ಉದ್ಘಾಟಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ನಗರದಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸಲು ರಸ್ತೆಗಳ ವಿಸ್ತರಣೆ ಕಾರ್ಯ ಶೀಘ್ರವಾಗಿ ನಡೆಯಬೇಕು. ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ಆಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ನಗರಸಭೆ ಸದಸ್ಯ ಹಾಗೂ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಹಳೇ ಬಸ್ ನಿಲ್ದಾಣ, ಮಾರುಕಟ್ಟೆ, ಕೋಟೆ ರಸ್ತೆಗಳಲ್ಲಿ ರಸ್ತೆ ಒತ್ತುವರಿ ಮಾಡಿ ಇಟ್ಟಿರುವ ಅಂಗಡಿಗಳಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಇವರಿಗೆ ಸೂಕ್ತ ಸ್ಥಳ ಕಲ್ಪಿಸುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು.

ನಗರಸಭೆಯಿಂದ ಇದಕ್ಕೆ ಸೂಕ್ತ ಸಹಕಾರ ನೀಡಲಾಗುವುದು ಎಂದು ಹೇಳಿದರು. ವರ್ತಕರ ಸಂಘದ ಮುಖಂಡ ಕೇಶವಮೂರ್ತಿ, ನಗರದ ಮುಖ್ಯರಸ್ತೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಠಾಣೆ ಡಿಕ್ರಾಸ್‌ಗೆ ವರ್ಗಾವಣೆಯಾದ ನಂತರ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗಿತ್ತು. ಹೊರ ಠಾಣೆ ಕಾರ್ಯಾರಂಭದಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ನಗರದ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಈ ಬಗ್ಗೆ ಪೊಲೀಸರು ಗಮನ ಹರಿಸಿಬೇಕು ಎಂದು ಮನವಿ ಮಾಡಿದರು.

ನಗರ ಠಾಣೆ ಪಿಎಸ್‌ಐ ಶಿವಕುಮಾರ್, ನಗರಸಭೆ ಸಭೆ ಅಧ್ಯಕ್ಷ ಎಂ.ಜಗದೀಶ್‌ರೆಡ್ಡಿ, ಸದಸ್ಯ ಟಿ.ಎನ್. ಪ್ರಭುದೇವ್, ವರ್ತಕರ ಸಂಘದ ಪುಟ್ಟರುದ್ರಪ್ಪ, ಪ್ರಸನ್ನ, ಕೆ.ಟಿ.ವೆಂಕಟಾಚಲಯ್ಯ  ಇತರರು ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.