ADVERTISEMENT

ನಿಷೇಧಿತ ಜಲ್ಲಿಕಟ್ಟು ಸ್ಪರ್ಧೆ: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2014, 8:54 IST
Last Updated 21 ಫೆಬ್ರುವರಿ 2014, 8:54 IST
ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ನಡೆದ ಜಲ್ಲಿಕಟ್ಟು (ಹೋರಿ ಬೆದರಿಸುವ) ಸ್ಪರ್ಧೆಯ ನೋಟ
ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ನಡೆದ ಜಲ್ಲಿಕಟ್ಟು (ಹೋರಿ ಬೆದರಿಸುವ) ಸ್ಪರ್ಧೆಯ ನೋಟ   

ಆನೇಕಲ್‌: ತಾಲ್ಲೂಕಿನ ಇಂಡ್ಲವಾಡಿ­ಯಲ್ಲಿ ಸಂಕ್ರಾಂತಿ ಹಬ್ಬದ ನೆಪದಲ್ಲಿ ತಮಿಳುನಾಡಿನವರು ನಡೆಸುತ್ತಿದ್ದ ನಿಷೇ­ಧಿತ ಜಲ್ಲಿಕಟ್ಟು (ಹೋರಿ ಬೆದರಿಸುವ) ಸ್ಪರ್ಧೆಯನ್ನು ಪೊಲೀಸರು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ.

ತಾಲ್ಲೂಕಿನ ಇಂಡ್ಲವಾಡಿಯಲ್ಲಿ ತಮಿ­ಳುನಾಡಿನಿಂದ ಬಂದ ನೂರಕ್ಕೂ ಹೆಚ್ಚು ಜೊತೆ ಎತ್ತುಗಳನ್ನು ಜಲ್ಲಿಕಲ್ಲು ಸ್ಪರ್ಧೆಗೆ ಸಜ್ಜುಗೊಳಿಸಲಾಗಿತ್ತು. ಬೆಳಿಗ್ಗೆ 10ಕ್ಕೆ ವೇಳೆಗೆ ವಿಶೇಷ ಸ್ಪರ್ಧೆಯನ್ನು ವೀಕ್ಷಿ­ಸಲು ಸಹಸ್ರಾರು ಜನರು ಬಂದಿ­ದ್ದರು.

ಎತ್ತುಗಳ ಕೊಂಬು­ಗಳಿಗೆ ಕುಚ್ಚು­ಗಳು, ನಗದು, ಚಿನ್ನದ ಉಂಗುರ, ಮತ್ತಿ­ತರ ಬೆಲೆ ಬಾಳುವ ಬಹು­ಮಾನಗಳನ್ನು ಕಟ್ಟ­ಲಾಗಿತ್ತು. ಬಹು­ಮಾನಗಳನ್ನು ಕೀಳಲು ಯುವಕರ ದಂಡು ಜಮಾಯಿ­ಸಿತ್ತು. ಹದ್ದಿನಲ್ಲಿ ಎತ್ತು­ಗಳು ಓಡುತ್ತಿ­ದಂತೆ ಸಾಹಸಿ ಯುವಕರು ಅಡ್ಡಗಟ್ಟಿ ಎತ್ತು­­ಗಳನ್ನು ನಿಲ್ಲಿಸಲು ಮುಂದಾಗು­ತ್ತಿದ್ದರು.

ಎತ್ತುಗಳು ಹದ್ದು ಮೀರಿ ಜನ­ರತ್ತ ದಿಕ್ಕು ದಿಸೆ ಇಲ್ಲದೇ ನುಗ್ಗಿದ್ದರಿಂದ ಐವ­ತ್ತಕ್ಕೂ ಹೆಚ್ಚು ಮಂದಿ ಗಾಯ­ಗೊಂಡಿ­ದ್ದಾರೆ ಎಂದು ಹೇಳಲಾಗಿದ್ದು ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಗಾಯಗೊಂಡರನ್ನು ಆನೇಕಲ್ ಆಸ್ಪತ್ರೆಗೆ ದಾಖಲು ಮಾಡ­ಲಾಯಿತು.

ತಮಿಳುನಾಡು ಹಾಗೂ ಕರ್ನಾ­ಟಕದಲ್ಲಿ ಎತ್ತು ಬೆದರಿಸುವ ಅಪಾಯ­ಕಾರಿ ಸ್ಪರ್ಧೆಯನ್ನು ನಿಷೇಧಿಸ­ಲಾಗಿತ್ತು,  ಆಹ್ವಾನ ಪತ್ರಿಕೆಯಲ್ಲಿ ಸಹ ಓಟದ ಬಗ್ಗೆ ಮಾಹಿತಿ ಪ್ರಕಟಿಸಿರಲಿಲ್ಲ, ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ನಿಷೇಧಿತ ಜಲ್ಲಿಕಟ್ಟು ಸ್ಪರ್ಧೆಯನ್ನು ತಡೆಯಲು ಪೊಲೀಸರು ಮುಂದಾ­ದರು.

ಸಿಪಿಐ ರಾಜೇಂದ್ರ, ಪಿಎಸ್‌ಐ ರಾಘ­ವೇಂದ್ರ ಬೈಂದೂರು ಸ್ಪರ್ಧೆ ನಿಲ್ಲಿಸು­-ವಂತೆ ಸೂಚನೆ ನೀಡಿದರೂ ಪೊಲೀಸ­ರೊಂದಿಗೆ ಮಾತಿನ ಚಕಮಕಿ ನಡೆಸಿ­ದರು. ನಂತರ ಡಿವೈಎಸ್ಪಿ ಬಲ­ರಾಮೇ­ಗೌಡ, ಅತ್ತಿಬೆಲೆ ಸಿಪಿಐ ಬಿ.ಕೆ.ಕಿಶೋ­ರ್‌ಕುಮಾರ್‌ ಅವರು  ಸಿಬ್ಬಂದಿ­ಯೊಂದಿಗೆ ಸ್ಥಳಕ್ಕೆ ಬಂದು ಲಾಠಿ ಚಾರ್ಜಿಗೆ ಮುಂದಾಗು­ತ್ತಿದ್ದಂತೆ ಜಲ್ಲಿ­ಕಟ್ಟು ಸ್ಪರ್ಧೆಗೆ ಬಂದಿದ್ದ­ವರು ಅಲ್ಲಿಂದ ಕಾಲ್ಕಿತ್ತರು.

ಎತ್ತುಗಳೊಂದಿಗೆ ಟೆಂಪೋ, ಬೈಕ್‌ ಮತ್ತಿ­­ತರ ವಾಹನಗಳೊಂದಿಗೆ ಸಹ­ಸ್ರಾರು ಜನರು ಗ್ರಾಮಕ್ಕೆ ಬಂದಿದ್ದರಿಂದ  ಪರಿಣಾಮ ಪುಟ್ಟ ಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.