ADVERTISEMENT

ಬಿಜೆಪಿ ಅಭ್ಯರ್ಥಿ ಪರವಾಗಿ ಭರ್ಜರಿ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:44 IST
Last Updated 22 ಮಾರ್ಚ್ 2014, 10:44 IST

ಆನೇಕಲ್‌:  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರವಾದ ಅಲೆಯಿಂದಾಗಿ ಸೋಲಿನ ಭೀತಿಯಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಹಲವಾರು ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿ­ದರು.

ಅವರು ತಾಲ್ಲೂಕಿನ ಚಂದಾಪುರ ಮತ್ತು ಆನೇಕಲ್‌ಗಳಲ್ಲಿ ರೋಡ್‌ ಶೋ ಮೂಲಕ ಬೆಂಗಳೂರು ಗ್ರಾಮಾಂತರ ಲೋಕ­ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಅವರ ಪರ­ವಾಗಿ ಮತಯಾಚನೆ ಮಾಡಿ ಮಾತ­ನಾಡಿ­ದರು.

‘ಸಚಿವರಾದ ಕೃಷ್ಣಭೈರೇಗೌಡ, ಪ್ರಕಾಶ್‌ ಹುಕ್ಕೇರಿ ಮತ್ತು ಎಚ್‌.ಆಂಜ­ನೇಯ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಪಕ್ಷ ತಂತ್ರ ರೂಪಿಸಿತ್ತು. ಆದರೆ ಬಿಜೆಪಿಯ ಅಲೆಯಿಂದಾಗಿ ಸೋಲುವ ಭೀತಿಯಿಂದಾಗಿ ಇವರು ಚುನಾ­ವಣೆ­ಯಿಂದ ದೂರ ಉಳಿದಿ­ದ್ದಾರೆ’ ಎಂದರು.
ರಾಜ್ಯದಲ್ಲಿ ಜನತೆ 22 ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿ ಪ್ರಧಾನಿಯಾಗಲು ಕರ್ನಾ­ಟಕದ ಜನತೆ ಕೊಡುಗೆ ನೀಡಲಿ­ದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತ­ಪಡಿಸಿದರು.

ಪಕ್ಷದ ಹಿರಿಯ ಮುಖಂಡ ಎ.ನಾರಾ­ಯಣ­ಸ್ವಾಮಿ ಹಾಗೂ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಮಾತನಾಡಿದರು.
ಚಂದಾಪುರದಿಂದ ಆನೇಕಲ್‌ಗೆ ಬರುವ ದಾರಿಯುದ್ದಕ್ಕೂ ಇಗ್ಗಲೂರು, ಮರಸೂರು, ಬ್ಯಾಗಡದೇನಹಳ್ಳಿ, ಕಾವ­ಲ­ಹೊಸಹಳ್ಳಿ ಬಳಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಮುಖಂಡರನ್ನು ಬರಮಾಡಿಕೊಂಡರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಜಿ.ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಮ್ಜದ್‌ ಪಾಷ  ಮತ್ತಿತರರು  ಈ  ಕಾರ್ಯಕ್ರಮದಲ್ಲಿ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.