ಆನೇಕಲ್: ತಾಲ್ಲೂಕಿನ ಸರ್ಜಾಪುರದ ತ್ಯಾವಕನಹಳ್ಳಿ ಬಳಿಯ ಅಶೋಕ ನಗರದ ದಮ್ಮಗಿರಿಯಲ್ಲಿ ಇತ್ತೀಚೆಗೆ ಬುದ್ಧನ ಪ್ರತಿಮೆ ವಿರೂಪಗೊಳಿಸಿದ ಘಟನೆ ಖಂಡಿಸಿ ಬೌದ್ಧ ಮಹಾಸಭಾ ಮತ್ತು ಬೌದ್ಧ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಸರ್ಜಾಪುರದಿಂದ ದಮ್ಮಗಿರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಬೌದ್ಧ ಅನುಯಾಯಿಗಳು, ಉಪಾಸಕರು, ಉಪಾಸಕಿಯರು, ಪ್ರಗತಿಪರ ಸಂಘಟನೆಗಳ ಮುಖಂಡರು ಬುದ್ಧನ ಉಪದೇಶಗಳನ್ನು ಪಠಿಸುತ್ತ ದಮ್ಮಗಿರಿಯ ವಿಹಾರದವರೆಗೆ ಸುಮಾರು 5 ಕಿ.ಮೀ ದೂರ ಶಾಂತಿಯುತ ಜಾಥಾ ನಡೆಸಿದರು.
ದಮ್ಮಗಿರಿಗೆ ಕಾಲ್ನಡಿಯಲ್ಲಿ ಬಂದ ಬುದ್ಧನ ಅನುಯಾಯಿಗಳನ್ನು ಉದ್ದೇಶಿಸಿ ಬೆಂಗಳೂರು ಮಹಾಬೋಧಿ ಸೊಸೈಟಿಯ ಆನಂದ ಬಂತೇಜಿ ಮಾತನಾಡಿ, `ಶಾಂತಿಯಿಂದ ಮಾತ್ರ ಪ್ರಪಂಚವನ್ನು ಗೆಲ್ಲಬಹುದು.
ಅಹಿಂಸೆಯೇ ಜೀವನ ತತ್ವವಾಗಬೇಕು. ಬುದ್ಧನ ಪ್ರತಿಮೆಯನ್ನು ವಿರೂಪಗೊಳಿಸಿದವರಿಗೆ ಸದ್ಬುದ್ಧಿ ದೊರೆಯಲಿ. ಅವರಲ್ಲಿರುವ ಹಿಂಸಾ ಗುಣಗಳು ನಾಶವಾಗಿ ಶಾಂತಿ, ಸಹನೆ, ಕರುಣೆ ಮೂಡಲಿ~ ಎಂದು ನುಡಿದರು.
ಮಹಾಬೋಧಿ ಸೊಸೈಟಿಯ ದಮ್ಮ ರಕ್ಕಿತ, ಬುದ್ದ ಪ್ರಕಾಶ್, ಡಿಎಸ್ಎಸ್ ಅಂಬೇಡ್ಕರ್ ವಾದ ಸಂಘಟನೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಬೌದ್ಧ ಉಪಾಸಕ ಎಸ್.ನರಸಿಂಹಯ್ಯ, ಮುಖಂಡರಾದ ರಾವಣ, ಸಿ.ಕೆ.ರಾಮು, ಕೆ.ಕುಮಾರ್, ಎಂ.ಗೋವಿಂದರಾಜು, ಗೌತಮ್ ವೆಂಕಿ, ಸುರೇಶ್ ಪೋತ, ಕಲ್ಲಹಳ್ಳಿ ಶ್ರೀನಿವಾಸ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.