ADVERTISEMENT

ಮೇಲ್ಸೇತುವೆ ರಸ್ತೆಗೆ ಸಿ.ಎಂ. ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 10:19 IST
Last Updated 4 ಮಾರ್ಚ್ 2014, 10:19 IST

ದೇವನಹಳ್ಳಿ:  ‘ಬೆಂಗಳೂರು ಸೇರಿದಂತೆ ನಗರದ ಸುತ್ತಮುತ್ತಲ ರಸ್ತೆ ವ್ಯಾಪ್ತಿ­ಯಲ್ಲಿ ಸಂಚಾರ ವ್ಯವಸ್ಥೆ ಸುಗಮ­ಗೊಳಿಸಲು ಮೇಲ್ಸೇತುವೆ ರಸ್ತೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣ ಅನಿ­ವಾರ್ಯ’ ಎಂದು ಮುಖ್ಯಮಂತ್ರಿ ಸಿದ್ದ­ರಾಮಯ್ಯ ತಿಳಿಸಿದರು.

ದೇವನಹಳ್ಳಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಸಾದಹಳ್ಳಿ ಟೋಲ್ ಪ್ಲಾಜಾ ಬಳಿ ನಗರದ ಬ್ಯಾಟರಾಯನ­ಪುರ­ದಿಂದ ವಿಮಾನ ನಿಲ್ದಾಣಕ್ಕೆ ನಿರ್ಮಾ­­ಣ­ವಾಗಿರುವ ನಾಲ್ಕುಪಥಗಳ ಮೇಲ್ಸೇ­ತುವೆ ಉದ್ಘಾಟಿಸಿ ಅವರು ಮಾತ­ನಾಡಿದರು.

‘22.12 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾ­­ಣವಾಗಿರುವ ಮೇಲ್ಸೇತುವೆ ಅಭಿ­­ವೃದ್ಧಿಗೆ ರೂ. 680 ಕೋಟೆ ವೆಚ್ಚ­ವಾಗಿದೆ. ರಸ್ತೆಯ ಎರಡು ಬದಿಯಲ್ಲಿ 41.82 ಸರ್ವಿಸ್ ರಸ್ತೆ ಅಭಿವೃದ್ಧಿ­ಯಾಗಿದೆ. ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಸುಗಮ ಸಂಚಾರಕ್ಕೆ ಅನು­­ಕೂಲ ಮಾಡುವ ಉದ್ದೇಶದಿಂದ ಬಸ­­ವೇಶ್ವರ ವೃತ್ತದಿಂದ ಬ್ಯಾಟ­ರಾಯನ­ಪುರದವರೆಗೂ ಷಟ್‌ಪಥ ರಸ್ತೆ ಅಭಿ­ವೃದ್ಧಿಗೆ ರೂ. 1100 ಕೋಟಿ ಮೀಸ­ಲಿಡಲಾಗಿದೆ. ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಪರಿಸ್ಥಿತಿಯೂ ಸುಧಾರಿಸು­ತ್ತದೆ. ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಅಭಿ­ವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಅಪಾರವಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮೊದಲು ಮಾಧ್ಯ­ಮ­ದವರೊಂದಿಗೆ ಮಾತ­ನಾಡಿದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್, ‘ದೇಶ­ದಲ್ಲಿ ಮೊದಲ ಬಾರಿಗೆ ಆಟೊ­ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಆರ್.ಎಸ್.­ಬಿ.ವೈ ರಾಷ್ಟ್ರೀಯ ಭೀಮಾ ಯೋಜನೆ ಮೂಲಕ ಸ್ಮಾರ್ಟ್ ಕಾರ್ಡ್ ವಿತರಿ­ಸಲಾಗುತ್ತಿದೆ. ಇಲ್ಲಿಯವರೆಗೆ 70 ಸಾವಿರ ಅರ್ಹ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗಿದೆ. ಇದರಿಂದ ಒಂದು ಕುಟುಂಬದ ಗರಿಷ್ಠ ಐದು ಸದ­ಸ್ಯರು ರೂ. 30 ಸಾವಿರದವರೆಗೆ ಉಚಿತ ಆರೋಗ್ಯ ಸೌಲಭ್ಯ ಪಡೆದು­ಕೊಳ್ಳ­ಬಹುದು’ ಎಂದು ತಿಳಿಸಿದರು.

ಕೇಂದ್ರ ಇಂಧನ ಹಾಗೂ ಪೆಟ್ರೋ­ಲಿಯಂ ಸಚಿವ ಡಾ.ಎಂ.ವೀರಪ್ಪ ಮೊಯಿಲಿ,  ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಎಚ್.­ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ, ಲೋಕೋ­ಪಯೋಗಿ ಸಚಿವ ಎಚ್.ಸಿ.­ಮಹಾದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಶಾಸಕ ವೆಂಕಟ­ರಮಣಪ್ಪ, ವಿಶ್ವನಾಥ, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.