ದೊಡ್ಡಬಳ್ಳಾಪುರ: ಅಪಘಾತಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದಕ್ಕೆ ರಸ್ತೆಗಳು ಸರಿ ಇಲ್ಲ ಎನ್ನುವ ಕಾರಣದ ಜೊತೆಗೆ ರಸ್ತೆ ಸುರಕ್ಷತೆಯ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬಿ.ಎಂ.ಪಾಟೀಲ್ ಹೇಳಿದರು.
ಅವರು ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ಎಸ್.ಎನ್.ಎಂಟರ್ ಪ್ರೈಸಸ್ನಲ್ಲಿ ₹100ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುವ ಗ್ರಾಹಕರಿಗೆ ಉಚಿತವಾಗಿ ‘ಪ್ರಜಾವಾಣಿ’ ಪತ್ರಿಕೆ ವಿತರಣೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಬೈಕ್ ಅಪಘಾತಗಳಲ್ಲಿ ಮೃತಪಡುತ್ತಿರುವವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿದೆ. ಇದಕ್ಕೆ ಅತಿ ವೇಗ, ರಸ್ತೆ ನಿಯಮ ಪಾಲನೆ ಮಾಡದೇ ಇರುವುದೇ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಾಲಾ ಕಾಲೇಜುಗಳಲ್ಲೂ ಯುವಕ, ಯುವತಿಯರಿಗೆ ತಿಳಿವಳಿಕೆ ಹೇಳಬೇಕು ಎಂದರು.
ಎಸ್.ಎನ್.ಎಂಟರ್ ಪ್ರೈಸಸ್ ಮಾಲೀಕ ಎಸ್.ನಾಗರಾಜ್ ಮಾತನಾಡಿ, ಆಧುನಿಕ ತಂತ್ರಜ್ಞಾನ ಆಳವಡಿಕೆ ನಂತರ ಪೆಟ್ರೋಲ್ ಬಂಕ್ಗಳು ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ. ಗುಣಮಟ್ಟದಲ್ಲಿ ಯಾವುದೇ ಮೋಸವಾಗುತ್ತಿಲ್ಲ ಎಂದರು. ತಾಲ್ಲೂಕು ವೀರಶೈವ ಲಿಂಗಾಯಿತ ಸಂಘದ ಅಧ್ಯಕ್ಷ ಎಸ್.ಜಿ.ಸೋಮರುದ್ರಶರ್ಮ, ಮುಖಂಡರಾದ ಮುತ್ತಣ್ಣ, ನಯಾಜ್, ಶಿವು, ಬಸವರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.