ದೇವನಹಳ್ಳಿ: ‘ರೈತರಿಗೆ ಪೂರಕವಾದ ಯೋಜನೆಗಳನ್ನು ನೀಡುವುದಾಗಿ ಭರವಸೆ ಕೊಟ್ಟು ಆಡಳಿತದ ಚುಕ್ಕಾಣಿ ಹಿಡಿದ ನಂತರ ಸರ್ಕಾರ ಮರೆತು ಬಿಟ್ಟಿದೆ’ ಎಂದು ಜಿಲ್ಲಾ ಪ್ರಾಂತ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಚಂದ್ರತೇಜಸ್ವಿ ಆರೋಪಿಸಿದರು.
ದೇವನಹಳ್ಳಿ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಾಂತ ರೈತ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 30 ದಿನಗಳ ಹಿಂದೆ 16ನೇ ರಾಜ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದ ವಿರುದ್ಧ ಕೃಷಿ ರಂಗದ ಮೇಲಿನ ದಾಳಿಯನ್ನು ಸರ್ಕಾರ ಮುಂದುವರೆಸಿದೆ ಎಂದರು.
ಸರ್ಕಾರ ಭೂ ಕಬಳಿಕೆದಾರರ ಜತೆ ರೈತರನ್ನು ಗುರುತಿಸಿರುವುದು ಖಂಡನಾರ್ಹ ಎಂದು ಅವರು ಅಭಿಪ್ರಾಯಪಟ್ಟರು. ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ, ಭೂಮಿ ತಾಯಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಧನಂಜಯ, ವಿವಿಧ ಘಟಕ ಪದಾಧಿಕಾರಿಗಳಾದ ಗೋವಿಂದಪ್ಪ, ನಾರಾಯಣಪ್ಪ, ಗುರುಲಿಂಗಯ್ಯ, ಜಿ.ಸಿ. ವೆಂಕಟೇಶ್, ನಂಜಮರಿ ಇದ್ದರು.
ರೈತರಿಗೆ ಹಕ್ಕುಪತ್ರ ನೀಡಲಿ
ಜಿಲ್ಲಾ ಪ್ರಾಂತ ರೈತರ ಸಂಘದ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿ, ರಾಜ್ಯ ಸರ್ಕಾರ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿ ಮಾಡುವುದಕ್ಕೆ ಮೊದಲು ರೈತರು ಬೆಳೆಯುತ್ತಿರುವ ಕೃಷಿ ಬೆಳೆಗಳ ಬಗ್ಗೆ ಸಮಗ್ರ ವರದಿ ಪಡೆದು.
ನಂತರ ಕಾಯ್ದೆ ಜಾರಿ ಮಾಡಬೇಕಿತ್ತು. ಬಗರ್ ಹುಕುಂಗೆ ಸಂಬಂಧಿಸಿದ ತಿರಸ್ಕರಿಸಲ್ಪಟ್ಟ ಅರ್ಜಿ ಮತ್ತೆ ಸರ್ಕಾರ ಸ್ವೀಕೃತಗೊಳಿಸಬೇಕು. ರಾಜ್ಯದಲ್ಲಿ ನಿವೇಶನ ಮತ್ತು ವಸತಿ ಯೋಜನೆ ಸಮರ್ಪಕವಾಗಿ ನಡೆಯಬೇಕು. ಹಾಲಿ ಬಗರ್ ಹುಕುಂ ಸಾಗುವಳಿದಾರರಿಗೆ ಮತ್ತು ಅರಣ್ಯ ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದರು.
* *
ಕೇಂದ್ರ ಸರ್ಕಾರ ಹೈನುಗಾರಿಕೆ ಮೇಲೆ ಗೋ ಸಂರಕ್ಷಣೆ ನೆಪದಲ್ಲಿ ಹಾಗೂ ಮೌಢ್ಯಾಚರಣೆ ಬಗ್ಗೆ ತಲೆಗೆಡಿಸಿಕೊಳ್ಳದೆ ಪುರೋಹಿತ ಶಾಹಿ ಸಂಸ್ಕೃತಿಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ.
ಚಂದ್ರತೇಜಸ, ಜಿಲ್ಲಾ ಪ್ರಾಂತ ರೈತ ಸಂಘ ಪ್ರಧಾನ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.