ADVERTISEMENT

ರೈತ ಹೋರಾಟದ ಧ್ವನಿ ನಂಜುಂಡಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ದೇವನಹಳ್ಳಿ : ಪ್ರೊ. ಎಂ.ಡಿ. ನಂಜುಂಡಸ್ವಾಮಿ ರೈತ ಹೋರಾಟದ ಧ್ವನಿಯಾಗಿದ್ದರು. ನಿದ್ರಾವಸ್ಥೆಯಲ್ಲಿದ್ದ ರೈತರನ್ನು ಸಂಘಟಿಸಿ ಹೋರಾಟಕ್ಕೆ ಸಿದ್ಧಗೊಳಿಸಿದರು ಎಂದು ಜಿಲ್ಲಾ ರೈತ ಸಂಘ ಅಧ್ಯಕ್ಷ ವೆಂಕಟನಾರಾಯಣಪ್ಪ ಎಂ.ಡಿ. ಎನ್. ಅವರ ರೈತ ಪರ ಹೋರಾಟದ ಬದುಕನ್ನು ಸ್ಮರಿಸಿದರು.

 ಇಲ್ಲಿನ ತಾಲ್ಲೂಕು ರೈತ ಸಂಘದ ಕಚೇರಿಯಲ್ಲಿ ಹಮ್ಮಿಕಂಡಿದ್ದ  ದಿ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಗ್ರಾಮ ಮಟ್ಟದಲ್ಲಿ ರೈತರನ್ನು ಸಂಘಟಿಸಿ, ರೈತ ಶಕ್ತಿ ಏನು ಎಂಬುದನ್ನು ತೋರಿಸಿದರು.ರೈತನಿಲ್ಲದೆ ದೇಶವಿಲ್ಲ, ಎಂಬ ಧ್ಯೇಯದೊಂದಿಗೆ ರೈತರ ಸಮಸ್ಯೆಗಳು ತೆರೆದಿಟ್ಟವರು ಎಂದು ಹೇಳಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಗಾರೆ ರವಿಕುಮಾರ್ ಮಾತನಾಡಿ, ನಾಡಿನ ನೆಲ. ಜಲದ ಲೂಟಿಯನ್ನು ತಡೆಯಲು ರೈತರಿಂದಲೇ ಸಾಧ್ಯ. ರೈತರು ಶಾಶ್ವತ ಬರಗಾಲದಿಂದ ತಪ್ಪಿಸಿಕೊಳ್ಳಬೇಕಾದರೆ, ರೈತ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ವೆಂಕಟೇಶ ಮಾತನಾಡಿ, ಹೋರಾಟಗಳು ಜನಮುಖಿಯಾಗಬೇಕು.ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೋರಾಟದ ಹಾದಿ ಅನಿವಾರ್ಯ ಎಂಬುದನ್ನು ತಿಳಿಯಬೇಕು.ರೈತರಿಗೆ ಸಾಲಬೇಡ, ಬೆಳೆದ ಬೆಳೆಗೆ ಸರ್ಕಾರ ವೈಜ್ಞಾನಿಕ ಬೆಲೆ ನೀಡಲಿ ಎಂದು ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷ ಮುನಿಶ್ಯಾಮಪ್ಪ, ತಾಲ್ಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಕೆ.ಚಂದ್ರಶೇಖರ್, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಶಶಿಧರ್ ಹಾಗೂ ಸದಸ್ಯರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಹಣ್ಣು ಹಂಪಲು ಬೀದಿ ಮಾರಾಟಗಾರ ಸಂಘದಿಂದ ರೋಗಿಗಳಿಗೆ ಹಣ್ಣು ಮತ್ತು ಹಂಪಲು ವಿತರಿಸಲಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.