ADVERTISEMENT

ವಿಜಯಪುರಕ್ಕೂ ತಟ್ಟಿದ ಬಿಸಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ಶಾಶ್ವತ ನೀರಾವರಿಗೆ ಆಗ್ರಹಿಸಿ ಚಿಕ್ಕಬಳ್ಳಾಪುರ, ಕೋಲಾರ ಬಂದ್
ವಿಜಯಪುರ: ಶಾಶ್ವತ ನೀರಾವರಿ ಹೋರಾಟ ಸಮಿತಿ ಕರೆ ನೀಡಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಬಂದ್ ಬಿಸಿ ಪಟ್ಟಣಕ್ಕೂ ತಟ್ಟಿತು. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಕೋಲಾರದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ವಿಜಯಪುರದಿಂದ ಬೆಂಗಳೂರು ಮತ್ತು ಕೋಲಾರದ ಕಡೆಗೆ ಬಸ್‌ಗಳಿಲ್ಲದೇ ಪರದಾಡಬೇಕಾಯಿತು.

ಶಿಡ್ಲಘಟ್ಟದಿಂದ ಆರಂಭವಾಗಬೇಕಾಗಿದ್ದ ಬಸ್‌ಗಳೆಲ್ಲವೂ ಬಾರದ ಕಾರಣ ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು. ಶಿಡ್ಲಘಟ್ಟದವರೆಗೆ ತೆರಳುವ ಬಸ್‌ಗಳು ವಿಜಯಪುರಕ್ಕೆ ಕೊನೆಗೊಂಡಿದ್ದರಿಂದ ಮಧ್ಯಾಹ್ನದ ನಂತರ ಬಸ್‌ನಿಲ್ದಾಣದಲ್ಲಿ ಸಾಕಷ್ಟು ಬಸ್‌ಗಳು ನಿಂತಿದ್ದವು. ಬಹುತೇಕ ಖಾಸಗಿ ಬಸ್‌ಗಳ ಸಂಚಾರವು ಸ್ಥಗಿತಗೊಂಡಿತ್ತು.

ಸಮೀಪದ ಜಂಗಮಕೋಟೆ ಕ್ರಾಸ್ ಬಳಿ ಶಾಶ್ವತ ನೀರಾವರಿ ಜಾರಿಗೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ರಸ್ತೆತಡೆ ನಡೆಸಲಾಯಿತು. ಜಂಗಮಕೋಟೆ ಬ್ಲಾಕ್ ಯುವ ಕಾಂಗ್ರೆಸ್ ಸಂಯೋಜಕ ಕೆ.ಹರೀಶ್, ತಾ.ಪಂ. ಮಾಜಿ ಉಪಾಧ್ಯಕ್ಷ ಎಚ್.ಎಂ.ಮುನಿಯಪ್ಪ, ಸದಸ್ಯ ಚನ್ನಕೃಷ್ಣಪ್ಪ, ಸರಸ್ವತಮ್ಮ ತಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಬಿ.ನರಸಿಂಹಮೂರ್ತಿ, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೃಷ್ಣಪ್ಪ, ಎನ್.ಪರಮೇಶ್, ಡಿ.ವಿ.ಶ್ರೀನಿವಾಸಪ್ಪ, ಡಿ.ರಮೇಶ್, ನಾಗಮಂಗಲ ಶ್ರೀನಿವಾಸ್, ಎಚ್.ಜಿ.ಶಶಿಕುಮಾರ್, ಆಂಜನೇಯರೆಡ್ಡಿ, ಎಚ್.ಬಿ.ನಾರಾಯಣಸ್ವಾಮಿ, ಬಾಬು, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜೆ.ವೆಂಕಟಾಪುರ ಗ್ರಾಮದಲ್ಲಿಯೂ ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.