ADVERTISEMENT

ವಿಜೃಂಭಣೆಯ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 13:17 IST
Last Updated 18 ಏಪ್ರಿಲ್ 2013, 13:17 IST

ಆನೇಕಲ್:  ಪಟ್ಟಣದ ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದಿಂದ ಒಂದು ಕಿ.ಮೀ ದೂರವಿರುವ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಜಾತ್ರೆಯ ಸಂಭ್ರಮ ಬೆಳಗ್ಗಿನಿಂದಲೇ ಆರಂಭವಾಗಿತ್ತು. ಮಧ್ಯಾಹ್ನ 2ರ ವೇಳೆಗೆ ತಿಮ್ಮರಾಯಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತು ದೇವಾಲಯದ ಸುತ್ತಲೂ ಸ್ಥಾಪಿಸಿದ್ದ ಅರವಂಟಿಕೆಗಳ ಬಳಿ ಸಾಗಿ ಮೂರ್ತಿಗೆ ಪೂಜೆ ಸಲ್ಲಿಸಿ ರಥದಲ್ಲಿ ಕುಳ್ಳಿರಿಸಲಾಯಿತು. ನೆರೆದಿದ್ದ ಸಹಸ್ರಾರು ಭಕ್ತಜನರು ಜಯಘೋಷವನ್ನು ಮಾಡುತ್ತ ಸ್ವಾಮಿಯ ತೇರಿಗೆ ದವನ ಚುಚ್ಚಿದ ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.  

ಪ್ರಧಾನ ಅರ್ಚಕ ಕೆ.ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿದವು. ತಮಿಳುನಾಡು ಸೇರಿದಂತೆ ಆನೇಕಲ್ ತಾಲ್ಲೂಕಿನ ಹಲವಾರು ಗ್ರಾಮಗಳಿಂದ ಸಹಸ್ರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು. ದೇವಾಲಯದ ಬಳಿ ಭಕ್ತರಿಗೆ ಮಜ್ಜಿಗೆ, ಪಾನಕ, ಕೊಸಂಬರಿ, ನೀಡುವ ಅರವಂಟಿಕೆಗಳನ್ನು ಸ್ಥಾಪಿಸಲಾಗಿತ್ತು. ಉರಿ ಬಿಸಿಲನ್ನು ಲೆಕ್ಕಿಸದೆ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಕಂದಾಯ ನಿರೀಕ್ಷಕ ಲಕ್ಷ್ಮಣ್, ದೇವಾಲಯ ಸಮಿತಿಯ ಅಧ್ಯಕ್ಷ ಪಟೇಲ್ ಗೋಪಾಲರೆಡ್ಡಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.