ದೊಡ್ಡಬಳ್ಳಾಪುರ: ವ್ಯಾಯಾಮ ಶಾಲೆಗಳಿಗೆ ಸರ್ಕಾರದ ಅನುದಾನ ಬಿಡುಗಡೆಯಾಗಿದ್ದು, ಅಧಿಕೃತ ವ್ಯಾಯಾಮ ಶಾಲೆಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ನಗರದ ಕುಚ್ಚಪ್ಪನಪೇಟೆಯಲ್ಲಿರುವ ಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ವತಿಯಿಂದ ನಡೆದ ೬೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವಕರು ಪಾರಂಪರಿಕ ಜೀವನ ಶೈಲಿಯನ ಕಡೆಗಣಿಸಿ ವೇಗದ ಜೀವನಕ್ಕೆ ಮಾರುಹೋಗುತ್ತಿದ್ದಾರೆ. ಈ ದಿಸೆಯಲ್ಲಿ ವ್ಯಾಯಾಮ ಶಾಲೆಗಳ ಬಳಕೆಗೆ ಯುವ ಪೀಳಿಗೆ ಮುಂದಾಗಬೇಕು. ದೈಹಿಕವಾಗಿ ಸದೃಢಗೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದರು.
ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹೆಸರಾಗಿರುವ ಮಾರುತಿ ವ್ಯಾಯಾಮ ಶಾಲೆ ಯುವಕರಿಗೆ ವಿವಿಧ ಕ್ರೀಡೆಗಳಲ್ಲಿ ಉತ್ತೇಜಿಸಿ, ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ ಎಂದರು.
ಶಾಲೆಯ ಹಿರಿಯ ಸದಸ್ಯರಾದ ಬಿ.ಜಿ.ಗೋಪಾಲ್, ಎಂ.ಎನ್.ಕೇಶವರಾಜ್, ಕೆ.ಜಿ.ಗೋಪಿನಾಥ್, ಎಚ್.ಡಿ.ರಘುನಾಥ್, ಕೆ.ಆರ್.ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ನಡೆದ ವ್ಯಾಯಾಮ ಸ್ಪರ್ಧೆಗಳಲ್ಲಿ ಡಿ.ನಟರಾಜ್ (ಸೀನಿಯರ್), ಪ್ರದೀಪ್ ಕುಮಾರ್ (ಜೂನಿಯರ್) ಚಾಂಪಿಯನ್ ಶಿಪ್ ಪಡೆದರು.
ಮಾರುತಿ ವ್ಯಾಯಾಮ ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಎಂ.ಬಿ.ಗುರುದೇವ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಪಿ.ಸಿ.ಲಕ್ಷ್ಮೀನಾರಾಯಣ್, ಲೋಕೇಶ್ ಬಾಬು, ಅಖಿಲ ಭಾರತ ವಿದ್ಯುತ್ ಮಗ್ಗಗಳ ನಿಗಮದ ಸದಸ್ಯ ಕೆ.ಜಿ.ಅಶೋಕ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಶ್ರೀಕಾಂತ, ವ್ಯಾಯಾಮ ಶಾಲೆಯ ಟ್ರಸ್ಟಿಗಳಾದ ಎಂ.ಎನ್.ಶಿವಶಂಕರ್, ಎ.ಆರ್.ಕೃಷ್ಣಮೂರ್ತಿ, ಎಚ್.ಎಸ್.ಸನಾತನಮೂರ್ತಿ, ಆರ್.ಕೃಷ್ಣಮೂರ್ತಿ, ಕಾರ್ಯದರ್ಶಿ ಆರ್.ಮನೋಜ್, ವಿಶ್ವನಾಥ್, ಮುರಳಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.