ADVERTISEMENT

ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ವಿಜಯಪುರ: ವ್ಯವಸಾಯಕ್ಕೆ ಅನುಕೂಲವಾಗುವಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಿ ಎಂದು ಭಾರತೀಯ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ನರಸಿಂಹಪ್ಪ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ನದಿ 40 ಟಿಎಂಸಿ ನೀರನ್ನು ಹೇಮಾವತಿ ನದಿಗೆ ಹಾಯಿಸುವುದರಿಂದ ಇಡೀ ಬಯಲು ಸೀಮೆಗೆ ಅಗತ್ಯ ನೀರನ್ನು ಒದಗಿಸಬಹುದು.ಹಾಸನ ಜಿಲ್ಲೆಯ ಗುಂಡ್ಯ ಜಲವಿದ್ಯುತ್ ಯೋಜನೆ ಕೈಬಿಟ್ಟು ಅದರ ನೀರನ್ನು ಜೂನ್-15 ರಿಂದ ಸೆಪ್ಟೆಂಬರ್-15 ರವರೆಗೆ ಸೂಕ್ತ ರೀತಿಯಲ್ಲಿ ಹೇಮಾವತಿ, ಯಗಚಿ ಮತ್ತು ವೇದಾವತಿಗೆ ಪೂರ್ವಕ್ಕೆ ತಿರುಗಿಸಿದಲ್ಲಿ  ಕಡೂರು, ಬೀರೂರು, ಅರಸೀಕೆರೆ, ಜಗಳೂರು, ಚಿತ್ರದುರ್ಗದ ಎಲ್ಲಾ ತಾಲ್ಲೂಕುಗಳು, ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ತಾಲ್ಲೂಕುಗಳಿಗೆ ಸುಮಾರು  80 ಟಿಎಂಸಿ. ನೀರು ಲಭ್ಯವಾಗಲಿದೆ ಎಂದು ವಿವರಿಸಿದರು.

ಈ ಯೋಜನೆ ಜಾರಿಯಿಂದ ಈ ಪ್ರದೇಶಗಳಿಗೆ ಕುಡಿಯುವ ನೀರಲ್ಲದೇ, ನೀರಾವರಿಗೂ ನೀರು ಒದಗಿಸಬೇಕೆಂದು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ನೇತ್ರಾವತಿ ತಿರುವು ಯೋಜನೆಯಿಂದ ಇಡೀ ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸಲು ಸಾಧ್ಯವಿಲ್ಲ.  ನೇತ್ರಾವತಿ ನದಿ 450 ಟಿ.ಎಂ.ಸಿ.ಸಾಮರ್ಥ್ಯ ಹೊಂದಿದೆ. ಈ ಕಾರಣದಿಂದ ನೇತ್ರಾವತಿ ತಿರುವು ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಅನಗತ್ಯ.

ನೇತ್ರಾವತಿ ತಿರುವ ಯೋಜನೆ ರೂಪಿಸುವುದರಿಂದ 5 ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ದೊರಕುತ್ತದೆ.ಆದ್ದರಿಂದ ಶೀಘ್ರವಾಗಿ ಈ ಯೋಜನೆ ಅನುಷ್ಟಾನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಹಾರೋಹಳ್ಳಿ ರಘು, ಅಂಕತಟ್ಟಿ ಕೆಂಪೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.