ದೊಡ್ಡಬಳ್ಳಾಪುರ: ಶಿಕ್ಷಣವನ್ನು ವ್ಯಾಪಾರ ಮಾಡುತ್ತಿರುವ ಕಾಳ ಧನಿಕರಿಗೆ ಸರ್ಕಾರ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ದೂರಿದ್ದಾರೆ.
ಅವರು ತಾಲ್ಲೂಕಿನ ಮೆಳೇಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಯುವ ಸ್ಫೂರ್ತಿ ಟ್ರಸ್ಟ್ ನೇತೃತ್ವದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 111ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಶನಿವಾರ ನಡೆದ ಶಾಲಾ ಶತಮಾನೋತ್ಸವ ಮತ್ತು ಶ್ರೀರಾಮಸುಬ್ಬಯ್ಯ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಟಿಇ ಯೋಜನೆಯಲ್ಲಿ ಪ್ರತಿ ಮಗುವಿಗೆ 12 ಸಾವಿರ ಹಣವನ್ನು ಖಾಸಗಿ ಶಾಲೆಗೆ ಸರ್ಕಾರ ಪಾವತಿಸುತ್ತಿದೆ. ಸರ್ಕಾರ ಕೂಡಲೆ ಆರ್ಟಿಇ ಯೋಜನೆಯನ್ನು ಸ್ಥಗಿತಗೊಳಿಸಿ, ಅದೆ ಹಣದಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲಾ ಮಾದರಿಯಲ್ಲಿ ಶಾಲೆಗಳಿಗೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕು ಎಂದರು.
ಶಿಕ್ಷಣ ತಜ್ಞ ಕೆ.ಇ. ರಾಧಾ ಕೃಷ್ಣ ಮಾತನಾಡಿ, ಇಂದಿನ ಶಿಕ್ಷಣದಿಂದ ಹೃದಯ ಸ್ಪರ್ಷಿ ಅಧಿಕಾರಿಗಳು ಸಾರ್ವಜನಿಕ ವಲಯದಲ್ಲಿ ಕಾಣುತ್ತಿಲ್ಲ ಎಂದು ಅವರು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಅಧಿಕಾರಿಗಳು ಮಾತ್ರ ಹೃದಯ ಸ್ಪರ್ಷಿಯಾಗಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಮೆಳೇಕೋಟೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಸುಮಾರು 50 ಜನ ನಿವೃತ್ತ ಮತ್ತು ಸೇವೆಯಲ್ಲಿರುವ ಶಿಕ್ಷಕರಿಗೆ ಶ್ರೀರಾಮಸುಬ್ಬಯ್ಯ ಸ್ಮಾರಕ ಸರ್ಕಾರಿ ಪ್ರೌಢ ಶಾಲೆ ಭೂ ದಾನಿ ರಾಮಸುಬ್ಬಯ್ಯ ಮೊಮ್ಮಗ ರಾಮಶೇಷಯ್ಯ, ಕಳೆದ ಸಾಲಿನಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಮೆಳೇಕೋಟೆ ಎಸ್ಜೆಸಿಆರ್ವಿ ಶಾಲೆಯ ವಿದ್ಯಾರ್ಥಿನಿ ಅನನ್ಯ ರಾಜಶೇಖರ್ಗೆ ಮತ್ತು ಇಲ್ಲಿನ ಸರ್ಕಾರಿ ಪ್ರೌಢ ಎಸ್ಎಸ್ಎಲ್ಸಿ ಸನ್ಮಾನ ಮಾಡಲಾಯಿತು.
ಸಾಲು ಮರದ ತಿಮ್ಮಕ್ಕನಿಗೆ ಯುವ ಸ್ಪೂರ್ತಿ ಟ್ರಸ್ಟ್ ತಂಡದ ಯುವಕರು ಸಸಿಯನ್ನು ನೀಡುವ ಮೂಲಕ ಅಭಿನಂದಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪ್ರತಿ ಗ್ರಾಮದಲ್ಲಿ ಐಎಎಸ್,ಕೆಎಎಸ್ ಅಧಿಕಾರಿಗಳನ್ನು ನೋಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಯುವ ಸ್ಪೂರ್ತಿ ಟ್ರಸ್ಟ್ನ ಗುರಿಗಳನ್ನು ಟ್ರಸ್ಟ್ನ ಸದಸ್ಯ ರಿಟ್ಟಾಲ್ ವಿಜಯಕುಮಾರ್ ತಿಳಿಸಿದರು. ಕಾರ್ಯಕ್ರಮದಲ್ಲಿ ಯುವ ಸ್ಪೂರ್ತಿ ಟ್ರಸ್ಟ್ ಗೌರವ ಅಧ್ಯಕ್ಷ ಎಚ್.ಎನ್. ಶ್ರೀನಿವಾಸಮೂರ್ತಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಶಾಸಕ ಪಿಳ್ಳಮುನಿಶಾಮಪ್ಪ, ಜಿಲ್ಲೂಕು ಪಂಚಾಯಿತಿ ಸದಸ್ಯ ಎಚ್.ಅಪ್ಪಯಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಸುನಿಲ್ಕುಮಾರ್, ಗ್ರಾ.ಪಂ. ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಆರ್.ಚಿದಾನಂದ್, ಬಿಇಓ ಹನುಮಂತಪ್ಪ, ಸ್ವಾತಂತ್ರ ಹೋರಾಟಗಾರ ರಾಮಶೇಷಯ್ಯ, ದೇವ ರಾಜ್ ಅರಸ್ ವಿದ್ಯಾಸಂಸ್ಥೆಯ ನಿರ್ದೆಶಕ ಜೆ.ರಾಜೇಂದ್ರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಂಗಪ್ಪ, ಹೊಬಳಿ ಪ್ರದಾನ ಕಾರ್ಯದರ್ಶಿ ಎಂ.ಆಂಜಿನಪ್ಪ, ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.