ದೇವನಹಳ್ಳಿ: ರೈತರು ಅತಿಹೆಚ್ಚು ಇಳುವರಿ ದುರಾಸೆಯಿಂದಾಗಿ ರಾಸಾಯನಿಕ ಗೊಬ್ಬರದ ಮೊರೆ ಹೋಗುತ್ತಿರುವ ಕಾಲಘಟ್ಟದಲ್ಲಿ ಸಾವಯವ ಕೃಷಿ ಮೂಲಕ ಇಳುವರಿಯಲ್ಲಿ ವೈವಿಧ್ಯತೆ ಪ್ರಯೋಗಿಸಿದ ರೈತರೊಬ್ಬರ ಯಶೋಗಾಥೆ ಇದು.
ಸ್ವಯಂ ಪ್ರಯೋಗ ಮಾಡಿ ಸಾವಯವ ಕೃಷಿಗೆ ಅರ್ಥಪೂರ್ಣ ಕೊಡುಗೆ ನೀಡುತ್ತಿರುವ ಯುವ ರೈತ ಶಿವನಾಪುರ ರಮೇಶ. ಕೃಷಿ ಕುಟುಂಬದಲ್ಲಿ ಬೆಳೆದ ಅವರು, ಎಸ್ಸೆಸ್ಸೆಲ್ಸಿ ನಂತರ ಕೃಷಿಯತ್ತ ಮುಖ ಮಾಡಿದರು. ರಾಸಾಯನಿಕ ಕೃಷಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಸಾವಯವ ಕೃಷಿಯಲ್ಲಿ ಪ್ರಯೋಗ ನಡೆಸಿ ಯಶಸ್ಸು ಕಂಡವರು.
ಕೊಟ್ಟಿಗೆ, ತಿಪ್ಪೆ, ಕೋಳಿ, ಬೂದಿಗೊಬ್ಬರಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸುವುದನ್ನು ಕಲಿತ ನಂತರ ಮಲ ತ್ಯಾಜ್ಯ ಬಗ್ಗೆ ಅಸಹ್ಯ ಪಟ್ಟುಕೊಳ್ಳದೆ ಸಾವಯವ ಕೃಷಿ ಕಲಿಕೆಯ ಹಾದಿಯಲ್ಲಿ ಸಾಗಿದ್ದನ್ನು ಅವರು ಮರೆತಿಲ್ಲ. ತಂದೆ ಬುದ್ಧಿವಾದ ಜತೆಗೆ ಏನಾದರು ಮಾಡಬೇಕು ಎಂಬ ಛಲದಿಂದ ಕಡಿಮೆ ಜಮೀನಿನಲ್ಲಿ ಪ್ರತಿಯೊಂದು ಬೆಳೆಗೂ ವಿಭಿನ್ನ ಪದ್ಧತಿ ಅನುಸರಿಸಿದ್ದಾರೆ.
2007ರಲ್ಲಿ ಸಾವಯವ ಕೃಷಿಯ ಚಿಂತನೆ ನಡೆಸಿ, ನರ್ಸರಿಯಲ್ಲಿ ಮೊದಲ ಬಾರಿಗೆ ಅಲಂಕಾರ ಗಿಡಗಳು ಮತ್ತು ಪನ್ನೇರಳಿ, ಕಮರಾಕ್ಷಿ, ಮಾವು ಅನೇಕ ಹಣ್ಣಿನ ಗಿಡ ತಯಾರಿ ನಡೆಸಿ ಮರದ ನೆರಳಿನಲ್ಲಿ ಗಿಡಗಳಿಗೆ ಆಸರೆ ನೀಡುವ ಪದ್ಧತಿ ಅನುಸರಿಸಿದರು.
ಅಲಂಕಾರಿಕ ಸಸ್ಯ ಮತ್ತು ಹಸಿರುವ ಪರಿಸರದಿಂದಲೇ ವಿಮಾನ ನಿಲ್ದಾಣಕ್ಕೆ ಶ್ರೇಷ್ಠ ಪರಿಸರ ವಿಮಾನ ನಿಲ್ದಾಣ ಎಂದು ಮೂರು ಬಾರಿ ಪ್ರಶಸ್ತಿ ಪಡೆದು ಕೊಂಡಿದೆ ನರ್ಸರಿಗಾಗಿ ಥಾಯ್ಲ್ಯಾಂಡ್, ಉಗಾಂಡ, ಮಂಗೋಲಿಯಾ, ಅಫ್ರಿಕಾ ಖಂಡ, ಪೊರ್ಟ್ ಬ್ಲೆರ್, ನೇಪಾಳ ಹಾಗೂ ದೇಶದ ವಿವಿಧ ರಾಜ್ಯದಲ್ಲಿ ಪ್ರತಿಯೊಂದು ಜಾತಿಯ ಹಣ್ಣು ಸಸಿಗಳು ಮತ್ತು ದೇಶಿ ತಳಿ ಹಣ್ಣಿನ ಸಸಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಾರೆ. ಸ್ಥಳೀಯ ವಾತಾವರಣಕ್ಕೆ ಒಗ್ಗಿಸಿ ತಾಯಿ ಸಸಿಯನ್ನು ಉಳಿಸಿಕೊಂಡು ಬೀಜಗಳನ್ನು ಸಸಿಗಳಾಗಿ ಮಾರ್ಪಡಿಸುವುದು ಅವರಲ್ಲಿನ ವಿಶೇಷ ಪ್ರಯೋಗದ ಫಲ.
ಸದಾ ಹೊಸತನಕ್ಕೆ ತೆರೆದುಕೊಳ್ಳುವ ರಮೇಶ್, ಪ್ರತಿಯೊಂದು ಸಸ್ಯಗಳನ್ನು ಕಸಿಮಾಡಿ ಬೆಳೆಸುವ ವಿಧಾನ ಅನುಸರಿಸುತ್ತಾರೆ. ಏಷ್ಯಾ ಖಂಡದಲ್ಲೇ ಪ್ರಥಮ ಎನ್ನಲಾದ ಸಾವಯುವ ನರ್ಸರಿಯಲ್ಲಿ ಫಲವೈವಿಧ್ಯ ತಾಣವಾಗಿದೆ. ದೇಶ – ವಿದೇಶದ ಮತ್ತು ನೆರೆಯ ರಾಜ್ಯದ ತಳಿಗಳಾದ ಸರ್ವ ಋತು ಮಾವು, ರುದ್ರಾಕ್ಷಿ, ಶ್ರೀಗಂಗಾ, ಚೆಟ್ಟಳ್ಳಿ, ತೂಬುಗೆರೆ, ಗಮ್ಲೆಸ್, ಎಂ.ಎಸ್.ಪಿ, ಪಾಲೂರು ಮಟ್ಟಂ, ಬೆರಿಕ, ಪಕ್ಕಾಮಟ್ಟ ಥಾಯ್ಲೆಂಡ್, ಪಿಂಕ್, ಕೆಂಪು, ಹಳದಿ ತಳಿ ಹಲಸು ಇಲ್ಲಿವೆ.
ವಿಶ್ವವಿಖ್ಯಾತ ದೇವನಹಳ್ಳಿ ಚಕ್ಕೋತ ಮೂಲೆ ಗುಂಪು ಆಗುತ್ತಿರುವ ಸಂದರ್ಭದಲ್ಲೇ ನಿರಂತರವಾಗಿ ಮೂಲ ತಳಿ ಉಳಿಸುವ ನಿಟ್ಟಿನಲ್ಲಿ ಕೈಗೊಂಡ ಶ್ರಮದಿಂದ ಚಕ್ಕೋತ ತಳಿ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.
ಅಗಾಧ ಮಾಹಿತಿ: ರಮೇಶ್ 500ಕ್ಕೂ ಹೆಚ್ಚು ಕಾರ್ಯಗಾರ ನಡೆಸಿ ಸಾವಯುವ ಕೃಷಿ ಮತ್ತು ತೊಟಗಾರಿಕೆ ಬೆಳೆ ಬಗ್ಗೆ ಉಪನ್ಯಾಪ ನೀಡಿದ್ದಾರೆ. ಸಸಿಗಳ ಪಾಲನೆಯಲ್ಲಿ ಅವರಿಗಿರುವಷ್ಟು ಜ್ಞಾನ ವಿಶ್ವವಿದ್ಯಾಲಯದಲ್ಲಿ ಇಲ್ಲ. ರಾಜ್ಯ ಸರ್ಕಾರದ ದಿ.ಮರಿಗೌಡ ತೊಟಗಾರಿಕೆ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮತ್ತು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿವೆ. ಅವರಲ್ಲಿನ ಸಾವಯುವ ಜ್ಞಾನ ಆನೇಕರಿಗೆ ಮಾರ್ಗದರ್ಶನವಾಗಿ ಪ್ರಗತಿಗೆ ಪೂರಕ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೆಶಕ (ನಿವೃತ್ತ) ಡಾ.ಎಸ್.ವಿ ಹಿತ್ತಲಮನಿ.
ವಿವಿಧ ಜಾತಿಯ ಹಣ್ಣುಗಳು
ಸಾವಯವ ಗುರು ಎಂದು ರೈತರಿಂದ ಗುರುತಿಸಿಕೊಂಡಿರುವ ರಮೇಶ ಅವರ ನರ್ಸರಿಯಲ್ಲಿ ಸಂಖ್ಯೆಗೆ ನಿಲುಕದಷ್ಟು ವಿವಿಧ ಜಾತಿಯ ಸಾವಯವ ಹಣ್ಣಿನ ಸಸಿಗಳಿವೆ. ಸಪೋಟ, ಸೀಬೆ, ನೇರಳೆ, ಪನ್ನೇರಳೆ, ನೀರು ನೇರಳೆ, ಮಲಯನ್ ಸೇಬು, ಚಂಪೆಡಕ್, ಡುರಿಯನ್, ದೀವಿ ಹಲಸು, ಸೀತಾಫಲ, ರಾಂಫಲ, ರಾಂಸೀತಾಫಲ, ಕೆಂಪು ಸೀತಾಫಲ, ಲಕ್ಷಣ ಫಲ, ನಿಂಬೆ, ಹೇರಳೆ, ಕಿತ್ತಳೆ ,ಮೂಸಂಬಿ, ಮಾದಲ ದಡ್ಲಿಗ್ರೇಪ್ ಫ್ರೂಟ್, ಎನ್ ಪ್ರೂಟ್, ನಾಡ ಬಾದಾಮಿ, ಆಖ್ರೋಟ್, ಬಾರೆ ಹಣ್ಣು , ಆಂಜೂರ ,ಪ್ಲಮ್, ಫೀಚ್, ಸೇಬು, ಪೇರ್, ದಾಳಿಂಬೆ ಹೀಗೆ ಹಲವು ಹಣ್ಣಿನ ಗಿಡಗಳು ಇಲ್ಲಿವೆ. ಪಾನ್ ಮಸಾಲದಂತಹ ಔಷಧಿ ಹಾಗೂ ಸುಗಂಧ ಸಸ್ಯಗಳ ಸಸಿಗಳು ಇಲ್ಲಿ ಬೆಳೆವಣಿಗೆಯಲ್ಲಿದ್ದು ಒಟ್ಟಾರೆ 627ಕ್ಕೂ ಹೆಚ್ಚು ವಿವಿಧ ಜಾತಿ ಹಣ್ಣು, ಇತರೆ ಕಾಯಿ ಬೆಲೆಬಾಳುವ ಮರಗಳ ಸಸಿಗಳು ಎನ್ನುತ್ತಾರೆ ರಮೇಶ್.
* *
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಳವಡಿಸಿರುವ ಬಹುತೇಕ ಅಲಂಕಾರಿಕ ಸಾವಯುವ ಸಸ್ಯ ಮತ್ತು ಗಿಡಗಳು ನಮ್ಮ ತೇಜ ನರ್ಸರಿಯದ್ದು ಶಿವನಾಪುರ ರಮೇಶ,
ಸಾವಯವ ಕೃಷಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.