ADVERTISEMENT

`ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ'

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 9:05 IST
Last Updated 5 ಆಗಸ್ಟ್ 2013, 9:05 IST

ವಿಜಯಪುರ:`ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದ್ದು, ಅಬಕಾರಿ ಅಧಿಕಾರಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ' ಎಂದು ಮಾದಿಗ ದಂಡೋರದ ರಾಜ್ಯ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಚನ್ನರಾಯಪಟ್ಟಣ, ವಿಶ್ವನಾಥಪುರ, ವಿಜಯಪುರ ವ್ಯಾಪ್ತಿಯ ಎಸ್ಸಿಎಸ್ಟಿ ಜನಾಂಗದವರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ವಿಶ್ವನಾಥಪುರ ವ್ಯಾಪ್ತಿಯಲ್ಲಿ ಮರಳು ದಂಧೆ ಹೆಚ್ಚಿದೆ  ಎಂದು ದೂರಿದ ಅವರು, ಅಪರೂಪಕ್ಕೊಮ್ಮೆ ಇಂತಹ ಸಭೆ ನಡೆಸಿ, ಪರಿಹಾರ ನೀಡದಿದ್ದರೆ ಪ್ರಯೋಜನವಾಗದು. 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ಎಂದು ಸಲಹೆ ನೀಡಿದರು.

ದಲಿತ ಮುಖಂಡ ಮಲ್ಲೇನಹಳ್ಳಿ ಕೃಷ್ಣಪ್ಪ ಮಾತನಾಡಿ, ಎಸ್ಸಿಎಸ್ಟಿ ಜನಾಂಗದವರು ದೂರು ನೀಡಿದರೆ ಪೊಲೀಸರು ಬೇಧ ಭಾವ ತೋರುತ್ತಿದ್ದಾರೆ ಎಂದು ದೂರಿದರು.

ದಲಿತ ಸಂಘರ್ಷ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಪಟ್ಟಣದಲ್ಲಿ ಅವ್ಯಾಹತವಾಗಿ ಜೂಜು ನಡೆಯುತ್ತಿದೆ. ದಲಿತರು ನೀಡುವ ದೂರನ್ನು ಪೊಲೀಸರು ಸ್ವೀಕರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ನಮ್ಮ ಮೇಲೆಯೇ ದೌರ್ಜನ್ಯ ಮಾಡಿ ಹೆದರಿಸಲಾಗುತ್ತಿದೆ ಎಂದರು.

ದಲಿತ ಮುಖಂಡ ಎಲೆ ಮುನಿರಾಜು ಮಾತನಾಡಿ, ಪಟ್ಟಣದ ಹೊರಭಾಗದ ಬೈಪಾಸ್ ರಸ್ತೆಗಳಲ್ಲಿ ಉಬ್ಬುಗಳನ್ನು ನಿರ್ಮಿಸಬೇಕೆಂದು ಕೋರಿದರು.

ದಲಿತ ಮುಖಂಡ ವೆಂಕಟೇಶ್ ಮಾತನಾಡಿ, ಪಟ್ಟಣದ ಬಹುತೇಕ ಬಾರ್‌ಗಳಲ್ಲಿ ಬೆಳಗ್ಗೆ 6 ಗಂಟೆಗೆ ಹಿಂಬಾಗಿಲಿನಿಂದ ಮದ್ಯವನ್ನು ಹೆಚ್ಚಿನ ದರದಲ್ಲಿ  ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರ ಬದುಕು ಹಾಳಾಗುತ್ತಿದೆ. ಪೊಲೀಸರು ಇಂತಹ ಬಾರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಡಿವೈಎಸ್‌ಪಿ ಶ್ರಿಧರ್ ಮಾತನಾಡಿ, ಸಭೆಯಲ್ಲಿ ಮಂಡಿಸಿದ ಕುಂದು ಕೊರತೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. 

ಎಸ್‌ಐಗಳಾದ ರಾಘವೇಂದ್ರ, ಮಧುಕರ್, ಸಂದೀಪ್ ಪಿ.ಕೌರಿ, ವೈಕುಂಠ, ಅಬಕಾರಿ ಇಲಾಖೆಯ ಎಸ್‌ಐ ಕುಮಾರ ಸ್ವಾಮಿ, ಪುರಸಭಾ ಸದಸ್ಯ ಎಂ.ನಾಗರಾಜ್, ಭಾರತ ಜನಜಾಗೃತಿ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ, ಬೂದಿಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪಾಪಣ್ಣ, ಮಾದಿಗ ದಂಡೋರದ ಯುವಸೇನೆ ಅಧ್ಯಕ್ಷ ವೇಣುಗೋಪಾಲ್, ವಾಲ್ಮೀಕಿ ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ವೆಂಕಟಪತಿ ಹಾಗೂ ವಿವಿಧ ಎಸ್ಸಿಎಸ್ಟಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.