
ಆನೇಕಲ್: ಪಟ್ಟಣದ ಹೊರವಲಯದಲ್ಲಿರುವ ಆಶ್ರಯ ಮನೆಗಳಲ್ಲಿ ವಾಸವಾ ಗಿರುವ ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲಿ ಹಕ್ಕು ಪತ್ರ ನೀಡುವುದಾಗಿ ಶಾಸಕ ಬಿ.ಶಿವಣ್ಣ ಭರವಸೆ ನೀಡಿದರು.
ಆಶ್ರಯ ಬಡಾವಣೆಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದ ಅವರು, ‘ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಮೂರು ದಿನಗಳಲ್ಲಿ ಶಾಸಕರ ನಿಧಿಯಿಂದ ಎರಡು ಕೊಳವೆ ಬಾವಿ ಕೊರೆಯಿಸಿ ಆಶ್ರಯ ಬಡಾವಣೆಗೆ ನೀರಿನ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಆಶ್ರಯ ಬಡಾವಣೆ ನಿರ್ಮಾಣವಾಗಿ 12 ವರ್ಷಗಳಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿಲ್ಲ, ಆಶ್ರಯ ಮನೆಗಳಲ್ಲಿ ವಾಸವಿದ್ದು ಸ್ವಂತ ನಿವೇಶನ ಅಥವಾ ಮನೆಯಿದ್ದಲ್ಲಿ ಕೂಡಲೇ ಖಾಲಿ ಮಾಡಿ ಬೇರೆಯವರಿಗೆ ಅನುಕೂಲ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಉಳ್ಳವರಿಗೆ ಮನೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಚಿಕ್ಕಹೊಸಹಳ್ಳಿ ರಸ್ತೆಯ ವೆಂಕಟೇಶ್ವರಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಡಾವಣೆಯಲ್ಲಿ ಸಹ ಅರ್ಹರಿಗೆ ನಿವೇಶನ ಹಾಗೂ ಮನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಹಾಗಾಗಿ ಯಾವುದೇ ಅರ್ಹ ಫಲಾನುಭವಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಡಾವಣೆ ನಿವಾಸಿಗಳು ಬೀದಿದೀಪ, ಒಳಚರಂಡಿ, ಕುಡಿಯುವ ನೀರು ಹಾಗೂ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು. ಆಶ್ರಯ ಬಡಾವಣೆಯ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು ಪುರಸಭಾ ಸದಸ್ಯ ಪಿ.ಶಂಕರ್ಕುಮಾರ್ ಮಾತನಾಡಿದರು
;ಪುರಸಭಾ ಮಾಜಿ ಅಧ್ಯಕ್ಷ ಸೋಮಶೇಖರ ರೆಡ್ಡಿ, ಸದಸ್ಯ ಮಲ್ಲಿಕಾರ್ಜುನ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ಕೆಂಪರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊಂಫಲಘಟ್ಟ ಮುನಿ ವೆಂಕಟಪ್ಪ, ಮುಖಂಡ ಕೃಷ್ಣಮೂರ್ತಿ, ರವಿಚೇತನ್, ಶೇಷಾದ್ರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.