
ಆನೇಕಲ್: ತಾಲ್ಲೂಕಿನ ಕೊಮ್ಮಸಂದ್ರ ಬಯಲು ಬಸವೇಶ್ವರ ದೇವಾಲಯದಲ್ಲಿ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದಿಂದ ಸುಗ್ಗಿ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೈತ ಸಮಾಜದ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿತ್ತು. ತಾಲ್ಲೂಕಿನ ವಿವಿಧ ಭಾಗದ ರೈತರು ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಗೋಪೂಜೆ, ರಾಶಿ ಪೂಜೆ, ಕೋಲಾಟ, ಭಜನೆ, ಗ್ರಾಮೀಣ ಕ್ರೀಡೆ, ರಂಗೋಲಿ ಸ್ಪರ್ಧೆ ಮತ್ತು ಎತ್ತುಗಳ ಮೆರವಣಿಗೆ ಆಯೋಜಿಸಲಾಗಿತ್ತು. ಸುಗ್ಗಿ ಹಬ್ಬದಲ್ಲಿ ಮಹಿಳೆಯರು ರಂಗೋಲಿ, ಕೋಲಾಟದಲ್ಲಿ ಪಾಲ್ಗೊಂಡು ಕಣ್ಮನ ಸೆಳೆದರು. ಪರಸ್ಪರ ಎಳ್ಳು ಬೆಲ್ಲವನ್ನು ಹಂಚುವ ಮೂಲಕ ಸಂಭ್ರಮಿಸಿದರು.
ಕೊಮ್ಮಸಂದ್ರದ ಪ್ರಮುಖ ಬೀದಿಗಳಲ್ಲಿ ರಾಸುಗಳ ಮೆರವಣಿಗೆ ನಡೆಸಲಾಯಿತು. ಗೋಪೂಜೆ ಮತ್ತು ರಾಶಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. 50ಕ್ಕೂ ಹೆಚ್ಚು ಜೊತೆ ರಾಸುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ರಮೇಶ್ ರಾಜು ಮಾತನಾಡಿ, ಸುಗ್ಗಿ ಹಬ್ಬವು ರೈತರ ಮತ್ತು ರಾಸುಗಳ ಹಬ್ಬವಾಗಿದೆ. ಸಕಲ ಜೀವರಾಶಿಗಳಿಗೂ ಅನ್ನ ನೀಡುವ ಕೃಷಿಕ ಸಮಾಜವನ್ನು ಗೌರವಿಸಬೇಕಾದುದ್ದು ಸಮಾಜದ ಜವಾಬ್ದಾರಿ. ಹಸಿವು ಮುಕ್ತ ಸಮಾಜದ ನಿರ್ಮಾಣದಲ್ಲಿ ರೈತಾಪಿ ವರ್ಗದ ಕೊಡುಗೆ ಅಪಾರ. ರೈತರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಿಸಾಸ್ ಸಂಘವು ಪ್ರತಿ ವರ್ಷ ಸುಗ್ಗಿ ಹಬ್ಬ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ನಿವೃತ್ತ ಡಿವೈಎಸ್ಪಿ ರಮೇಶ್, ಶ್ರೀನಿವಾಸರೆಡ್ಡಿ, ಪ್ರಸನ್ನಕುಮಾರ್, ಮಂಜುನಾಥ್, ಸುಬ್ರಮಣಿ, ಅಶ್ವಿನ್, ಸ್ವರೂಪ್, ರಾಜಗೋಪಾಲ್, ಸತೀಶ್ಬಾಬು, ವೆಂಕಟಸ್ವಾಮಿರೆಡ್ಡಿ, ಇಂದಿರಮ್ಮ, ಕೃಷ್ಣಾರೆಡ್ಡಿ, ಹರೀಶ್, ನಾರಾಯಣಸ್ವಾಮಿ, ಪ್ರವೀಣ್ ಇದ್ದರು.