ವಿಜಯಪುರ: ಬನ್ನಿ ಸರ್...ಗುದ್ದಲಿ ತಗೊಳ್ಳಿ... ಕೊಡಲಿ ತಗೊಳ್ಳಿ.. ಬನ್ನಿ ಸರ್ ಏನೋ ಒಂದು ರೇಟು ಮಾಡಿ ಕೊಡ್ತೀನಿ.. ಇವತ್ತು ಬಿಟ್ಟರೆ ಇಷ್ಟು ಕಡಿಮೆ ರೇಟಿಗೆ ಮತ್ತೆ ಸಿಗಲ್ಲ ಎನ್ನುತ್ತಾ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಾಗರಿಕರನ್ನು ಪುಸಾಯಿಸುವ ಪ್ರಯತ್ನ ಮುಂದುವರಿದಿದೆ.
ಹೊಟ್ಟೆಪಾಡಿಗಾಗಿ ತಾವು ಕಲಿತಿರುವ ಕಮ್ಮಾರಿಕೆ ಕೆಲಸದಲ್ಲಿ ತೊಡಗಿಸಿಕೊಂಡಿರುವ ಉತ್ತರ ಪ್ರದೇಶ ಮೂಲದ ಕಸಬುದಾರರು ಕೃಷಿ ಚಟುವಟಿಕೆಗಳಿಗಾಗಿ ಉಪಯೋಗಿಸುವ ಉಪಕರಣಗಳ ತಯಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಳೆ – ಬಿಸಿಲು ಎನ್ನದೆ ರೈತರಿಗೆ ಬೇಕಾದ ಕೊಡಲಿ, ಬರ್ಚಿ, ಸುತ್ತಿಗೆ, ಚಾಕು, ಬತ್ತಳಿಕೆ, ಫಾವಡಿ, ಪಿಕಾಸು, ನೇಗಿಲು, ಕುಡುಗೋಲು, ಪಲಗ್ ಇತರ ಸಲಕರಣೆ ತಯಾರಿಸುತ್ತಾರೆ. ಹೀಗೆ ತಯಾರಿಸಿದ ಕಬ್ಬಿಣದ ಕೃಷಿ ಉಪಕರಣಗಳನ್ನು ರಸ್ತೆ ಬದಿಯಲ್ಲೆ ಸಾಲಾಗಿ ಜೋಡಿಸಿ ಮಾರಾಟ ಮಾಡುತ್ತಾರೆ.
ವರ್ಷದಲ್ಲಿ 10 ತಿಂಗಳು ದೇಶದಾದ್ಯಂತ ಸಂಚರಿಸುತ್ತಾ ಅಲ್ಲಲ್ಲಿ ಡೇರೆ ಹಾಕಿ ಕುಲುಮೆ ಹಚ್ಚಿ ಬಯಲು ಕಮ್ಮಾರಿಕೆ ಮಾಡಿ ಹೊಟ್ಟೆ ಹೊರೆಯುತ್ತಾರೆ. ಎಲ್ಲಿಯವರೆಗೆ ಹೊಟ್ಟೆ ತುಂಬುತ್ತದೆಯೋ ಅಲ್ಲಿಯವರೆಗೆ ಆ ಊರು, ನಂತರ ಮತ್ತೊಂದು ಊರು ಎನ್ನುತ್ತಾರೆ ಭೂಪಾಲ್ನ ಚೋಟು.
ಈ ಕಸುಬಿನಿಂದ ಮಕ್ಕಳಿಗೆ ಸೂಕ್ತ ಶಿಕ್ಷಣ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಭಾಷೆ, ಪ್ರಾಂತ್ಯ ಮೀರಿ ದೇಶದ ಎಲ್ಲ ರಾಜ್ಯಗಳಲ್ಲಿ ಸಂಚರಿಸುವ ಇವರಿಗೆ ಶಿಕ್ಷಣ ಕನಸಿನ ಮಾತಾಗಿದೆ. ಮಕ್ಕಳು ಬಾಲ್ಯದಿಂದಲೇ ಕಂಬಾರಿಕೆ ಕಸುಬು ಕಲಿಯುತ್ತಾರೆ. ಅಲೆಮಾರಿಗಳಾಗಿರುವುದರಿಂದ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆದಿಲ್ಲ ಎನ್ನುತ್ತಾರೆ ಸಂತಾರಾಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.