ಬಂಧನ
(ಪ್ರಾತಿನಿಧಿಕ ಚಿತ್ರ)
ಆನೇಕಲ್ : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆಸಲು ಯೋಜನೆ ರೂಪಿಸಿದ್ದ ಆರು ಮಂದಿ ಸುಫಾರಿ ಕಿಲ್ಲರ್ಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ಅರುಣ್ ಕುಮಾರ್, ಮಂಜುನಾಥ್, ಆನಂದ್, ಹರ್ಷವರ್ಧನ್, ವಿಜಯಕುಮಾರ್ ಬಂಧಿತ ಆರೋಪಿಗಳು. ಇವರಿಗೆ ಸುಪಾರಿ ನೀಡಿದ್ದ ಸಂಪತ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ವಾಬಸಂದ್ರದ ಚಿಕ್ಕಪ್ಪ–ದೊಡ್ಡಪ್ಪನ ಮಕ್ಕಳಾದ ಚಂದ್ರಪ್ಪ ಮತ್ತು ಸಂಪತ್ ಕುಮಾರ್ ನಡುವೆ ವಿವಾದ ಇತ್ತು ಎನ್ನಲಾಗಿದೆ.
ಚಂದ್ರಪ್ಪ ಅವರನ್ನು ಹತ್ಯೆ ಮಾಡಲು ಸಂಪತ್ಕುಮಾರ್ ₹1.5ಲಕ್ಷವನ್ನು ಸುಫಾರಿಯನ್ನು ಕಿಲ್ಲರ್ಗಳಿಗೆ ನೀಡಿದ್ದರು ಎನ್ನಲಾಗಿದೆ. ವಾಬಸಂದ್ರದ ಚಂದ್ರಪ್ಪ ಅವರು ದ್ವಿಚಕ್ರ ವಾಹನದಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಾದ್ರಿ ಬಡಾವಣೆಯ ಬಳಿ ತೆರಳುತ್ತಿದ್ದ ವೇಳೆ ಹೊಂಚು ಹಾಕಿದ್ದ ಆರೋಪಿಗಳು ಲಾಂಗ್, ಚಾಕುವಿನಿಂದ ಚಂದ್ರಪ್ಪ ಅವರನ್ನು ಹತ್ಯೆ ಮಾಡಲು ಯತ್ನಿಸಿದರು ಎಂದು ಸರ್ಕಲ್ ಇನ್ಸ್ಪೆಕ್ಟರ್ ಐ.ಎನ್.ರೆಡ್ಡಿ ತಿಳಿಸಿದ್ದಾರೆ.
ಹಲ್ಲೆಯಿಂದ ತಪ್ಪಿಸಿಕೊಂಡ ಚಂದ್ರಪ್ಪ ಓಡಿಹೋಗಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಪ್ಪನ ಕೈಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪತ್ಕುಮಾರ್ನಿಂದ ಸುಫಾರಿ ಪಡೆದಿದ್ದ ಆನಂದ್, ಹರ್ಷವರ್ಧನ್, ವಿಜಯಕುಮಾರ್ ಹಲ್ಲೆಗೆ ಯತ್ನಿಸಿದ್ದರು. ಇವರೊಂದಿಗೆ ಮಂಜುನಾಥ್ ಮತ್ತು ಅರುಣ್ ಸಹಕರಿಸಿದ್ದರು ಎಂದು ತಿಳಿಸಿದರು.
ಚಂದ್ರಪ್ಪನ ಕೊಲೆಗೆ ಸುಫಾರಿ ನೀಡಿದ್ದ ಸಂಪತ್ ಆಸ್ಪತ್ರೆಗೆ ಬಂದು ಚಂದ್ರಪ್ಪ ಅವರನ್ನು ಮಾತನಾಡಿಸಿ ತನಿಖೆಯ ದಾರಿ ತಪ್ಪಿಸಲು ತನಗೆ ಏನು ತಿಳಿಯದಂತೆ ನಾಟಕ ಮಾಡಿದ್ದರು ಎನ್ನಲಾಗಿದೆ.
ಹೆಬ್ಬಗೋಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.