ADVERTISEMENT

ಚಿಕ್ಕಸಣ್ಣೆ‌ ಅಮಾನಿಕೆರೆ ಸ್ವರೂಪಕ್ಕೆ ಧಕ್ಕೆ

ಖಾಸಗಿ ಲೇಔಟ್‌ಗೆ ಪೂರೈಕೆ: ವರದಿ ಸಲ್ಲಿಕೆಗೆ ತಹಶೀಲ್ದಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 3:04 IST
Last Updated 11 ಮೇ 2022, 3:04 IST
ದೇವನಹಳ್ಳಿ ತಾಲ್ಲೂಕಿನ ಚಿಕ್ಕಸಣ್ಣೆ ಗ್ರಾಮದ ಸಣ್ಣ ಅಮಾನಿಕೆರೆ ಕೋಡಿಯಲ್ಲಿ ಯಂತ್ರಗಳನ್ನು ಬಳಸಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು
ದೇವನಹಳ್ಳಿ ತಾಲ್ಲೂಕಿನ ಚಿಕ್ಕಸಣ್ಣೆ ಗ್ರಾಮದ ಸಣ್ಣ ಅಮಾನಿಕೆರೆ ಕೋಡಿಯಲ್ಲಿ ಯಂತ್ರಗಳನ್ನು ಬಳಸಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು   

ದೇವನಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿರುವ 550 ಎಕರೆ ವಿಸ್ತೀರ್ಣದ ಚಿಕ್ಕಸಣ್ಣೆಯ ಸಣ್ಣ ಅಮಾನಿಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ. ಇದರಿಂದ ಕೆರೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ ಎಂದು ರೈತರು
ದೂರಿದ್ದಾರೆ.

ಅಭಿವೃದ್ಧಿ ಕೆಲಸಕ್ಕೆ ಎಂದು ಸಬೂಬು ಹೇಳಿ ಮಣ್ಣು ತೆಗೆಯಲಾಗುತ್ತಿದೆ. ಆದರೆ, ಕೆರೆಯ ಮಣ್ಣನ್ನು ಖಾಸಗಿ ಬಡಾವಣೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ಅಚ್ಚುಕಟ್ಟು ಪ್ರದೇಶದ ಅನ್ನದಾತರು ದೂರಿದ್ದಾರೆ.

ಅಣ್ಣೇಶ್ವರ ಗ್ರಾಮ ಪಂಚಾಯಿತಿ ಸರಹದ್ದಿನ ಗಡಿಯಲ್ಲಿರುವ ಸಣ್ಣ ಅಮಾನಿಕೆರೆ ಕೋಡಿ ಪ್ರದೇಶದಲ್ಲಿ ಯಾವುದೇ ಅನುಮತಿ ಪಡೆಯದೆ ಯಂತ್ರಗಳ ಮೂಲಕ ಮಣ್ಣು ತೆಗೆಯಲಾಗುತ್ತಿದೆ. ಇದರಿಂದ ಕೆರೆ ಪಾತ್ರಕ್ಕೆ ಧಕ್ಕೆಯಾಗುತ್ತಿದೆ. ಮಣ್ಣನ್ನು ತೆಗೆದು ಉದಯಗಿರಿ ಗ್ರಾಮದ ಮೂಲಕ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಕಂದಾಯ ಇಲಾಖೆಗೆ ದೂರು ನೀಡಿದ್ದರು.

ADVERTISEMENT

ಈ ದೂರಿನ ಸಂಬಂಧ ಸ್ಥಳಕ್ಕೆ ಆಗಮಿಸಿದ ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದ ವಾಹನಗಳನ್ನು ತಡೆದು ಅನುಮತಿ ಪತ್ರ ನೀಡುವಂತೆ ತಾಕೀತು ಮಾಡಿದರು. ಈ ವೇಲೆ ಜೆಸಿಬಿ ಹಾಗೂ ಲಾರಿಗಳ ನಿರ್ವಾಹಕರ ಬಳಿ ಯಾವುದೇ ಅನುಮತಿ ಪತ್ರ ಇಲ್ಲದಿರುವುದು ಬಯಲಾಯಿತು.

ಇದು ಕಾನೂನುಬಾಹಿರ. ಇನ್ನೊಮ್ಮೆ ಕೆರೆಯ ಬಳಿ ಮಣ್ಣು ತೆಗೆದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಾಹನಗಳನ್ನು ತೆರವು ಮಾಡಿದರು.

ಅಣ್ಣೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್‌ ಮಾತನಾಡಿ, ‘ಗ್ರಾಮದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಎರಡು ಲೋಡ್‌ ಮಣ್ಣು ಬೇಕಿದ್ದರಿಂದ ಕೆರೆಯಿಂದ ಮಣ್ಣು ತೆಗೆದಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ಎಚ್ಚರಿಕೆ ನಂತರ ಕೆಲಸ ಸ್ಥಗಿತಗೊಂಡಿದೆ’ ಎಂದು
ಪ್ರತಿಕ್ರಿಯಿಸಿದರು.

‘ಸಣ್ಣ ಅಮಾನಿಕೆರೆಯ ಕೋಡಿಯಲ್ಲಿ ಮಣ್ಣು ತೆಗೆಯಲು ನಾನು ಯಾವುದೇ ಆದೇಶ ಪತ್ರ ನೀಡಿಲ್ಲ. ಈ ಪ್ರಕರಣ ಸಂಬಂಧ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದುಅಣ್ಣೇಶ್ವರ ಗ್ರಾಮ ಪಂಚಾಯಿತಿ ಪಿಡಿಒಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.