ADVERTISEMENT

‘ಅಜಾಗ್ರತೆಯಿಂದ ಅಪಘಾತ ಹೆಚ್ಚಳ’

ರಸ್ತೆ ಸುರಕ್ಷತಾ ನಿಯಮ: ಜಾಗೃತಿಗೆ ಕರೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:22 IST
Last Updated 23 ಫೆಬ್ರುವರಿ 2019, 13:22 IST
ವಿಜಯಪುರದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯ ಕುರಿತು ಜಾಗೃತಿ ಮೆರವಣಿಗೆಗೆ ಸಬ್ ಇನ್‌ಸ್ಪೆಕ್ಟರ್ ನರೇಶ್ ನಾಯಕ್ ಚಾಲನೆ ನೀಡಿದರು
ವಿಜಯಪುರದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯ ಕುರಿತು ಜಾಗೃತಿ ಮೆರವಣಿಗೆಗೆ ಸಬ್ ಇನ್‌ಸ್ಪೆಕ್ಟರ್ ನರೇಶ್ ನಾಯಕ್ ಚಾಲನೆ ನೀಡಿದರು   

ವಿಜಯಪುರ: ರಸ್ತೆಯಲ್ಲಿ ಚಾಲಕರು ಪಾಲನೆ ಮಾಡಬೇಕಾಗಿರುವ ನಿಯಮಗಳ ಕುರಿತು ಸರ್ಕಾರ, ಸಾರಿಗೆ ಇಲಾಖೆಯ ಮೂಲಕ ಜಾಗೃತಿ ಮೂಡಿಸುತ್ತಿದ್ದರೂ ಕೆಲವರ ಅಜಾಗರೂಕತೆಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಸಬ್ ಇನ್‌ಸ್ಟೆಕ್ಟರ್ ನರೇಶ್ ನಾಯಕ್ ಹೇಳಿದರು.

ಇಲ್ಲಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ರಸ್ತೆಗಳ ಮೇಲೆ ಚಾಲನೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಹೆಚ್ಚಿನ ವಾಹನಗಳ ದಟ್ಟಣೆ ಇರುವುದರಿಂದ ವೇಗದ ಮಿತಿಯನ್ನು ಅಳವಡಿಸಲಾಗಿರುತ್ತದೆ. ಈ ಮಿತಿಯನ್ನು ಗಮನಿಸದೆ ಕೆಲವರು ವೇಗವಾಗಿ ಚಾಲನೆ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂದರು.

ADVERTISEMENT

ಶಾಲಾ ಮಕ್ಕಳಿಗೂ ದ್ವಿ ಚಕ್ರವಾಹನಗಳನ್ನು ಕೊಡಿಸುತ್ತಿದ್ದಾರೆ. ವಾಹನ ಓಡಿಸುವ ವಯಸ್ಸು ಅವರದು ಅಲ್ಲ, ಆದರೂ ತಮ್ಮ ಪ್ರತಿಷ್ಠೆಗಾಗಿ ಮಕ್ಕಳಿಗೆ ವಾಹನ ಕೊಡಿಸುತ್ತಾರೆ. ಕಾನೂನು ಪ್ರಕಾರ ಅವರ ಮೇಲೆ ಹಾಗೂ ಪೋಷಕರ ಮೇಲೆ ಕೇಸು ದಾಖಲಿಸಲು ಅವಕಾಶವಿದೆ ಎಂದರು.

ರೈತ ಮುಖಂಡ ಮಂಡಿಬೆಲೆ ನಾರಾಯಣಸ್ವಾಮಿ ಮಾತನಾಡಿ, ರಸ್ತೆಗಳಲ್ಲಿ ಅನುಸರಿಸಬೇಕಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಕ್ಕಳಿಗೆ ಮನೆಗಳಲ್ಲೆ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು. ಇಲಾಖೆಗಳಿಂದ ಎಷ್ಟೇ ಜಾಗೃತಿ ಮೂಡಿಸಿದರೂ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಪಘಾತಗಳಾದಾಗ ಮಾತ್ರ. ಜಾಗ್ರತೆ ವಹಿಸುವಂತಹ ಜನರು ಪುನಃ ಅರಿವಿಲ್ಲದಂತೆ ವರ್ತನೆ ಮಾಡುತ್ತಿರುವುದು ಖಂಡನೀಯವಾದ ವಿಚಾರ ಎಂದರು.

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಹಾಗೂ ಚಾಲನೆ ವೇಳೆ ಕೈಗೊಳ್ಳಬೇಕಾಗಿರುವ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಕರಪತ್ರಗಳನ್ನು ಹಂಚಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಿಗೆ ಜಾಗೃತಿ ಮೂಡಿಸಿದರು.

ಬೆಸ್ಕಾಂ ಇಲಾಖೆಯ ಎಂಜಿನಿಯರ್‌ಗಳಾದ ಕಾಂತರಾಜ್, ಯೋಗೇಶ್, ಪೊಲೀಸ್ ಸಿಬ್ಬಂದಿ, ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.