ADVERTISEMENT

ಮೇವು, ನೀರಿನ ಹಾಹಾಕಾರ ನೀಗಿಸಲು ಕ್ರಮ

ಬಿಜ್ಜವಾರ ಗ್ರಾಮದಲ್ಲಿ ಮೇವು ವಿತರಿಸಿ ಅಧಿಕಾರಿಗಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 14:29 IST
Last Updated 13 ಜೂನ್ 2019, 14:29 IST
ವಿಜಯಪುರ ಹೋಬಳಿ ಬಿಜ್ಜವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಎಲ್.ಎನ್.ನಾರಾಯಣಸ್ವಾಮಿ ಮೇವು ವಿತರಣೆ ಮಾಡಿದರು
ವಿಜಯಪುರ ಹೋಬಳಿ ಬಿಜ್ಜವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಎಲ್.ಎನ್.ನಾರಾಯಣಸ್ವಾಮಿ ಮೇವು ವಿತರಣೆ ಮಾಡಿದರು   

ವಿಜಯಪುರ: ತೀವ್ರ ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿಗಾಗಿ ಉಂಟಾಗಿರುವ ಹಾಹಾಕಾರ ತಪ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಬಿಜ್ಜವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಒಣಮೇವು ವಿತರಿಸಿ ಮಾತನಾಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಸಮಸ್ಯೆಗಳ ನಿವಾರಣೆಗಾಗಿ ಅನುದಾನ ಕೊರತೆಯಿಲ್ಲ. ಸಮಸ್ಯೆಗಳನ್ನು ಗಮನಕ್ಕೆ ತಂದರೆ ಕೂಡಲೇ ಬಗೆಹರಿಸಲಾಗುವುದು ಎಂದರು.

ಟಾಸ್ಕ್‌ಪೋರ್ಸ್ ನಡಿ ಈಗಾಗಲೇ ತಾಲ್ಲೂಕಿನಲ್ಲಿ 120ಟನ್ ಒಣಮೇವು ವಿತರಣೆ ಮಾಡಲಾಗಿದೆ. ಬೇಡಿಕೆ ಬಂದರೆ ಮತ್ತಷ್ಟು ಮೇವು ಖರೀದಿ ಮಾಡಿ ಕೊಡುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಸಿರು ಮೇವು ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಬಿತ್ತನೆ ಬೀಜ ಸಕಾಲದಲ್ಲಿ ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ADVERTISEMENT

ತಹಶೀಲ್ದಾರ್ ಕೇಶವಮೂರ್ತಿ ಮಾತನಾಡಿ, ‌ಬರಗಾಲದ ತೀವ್ರವಾಗಿರುವ ಕಡೆ ಜಾನುವಾರುಗಳಿಗೆ ಮೇವು ವಿತರಣೆ ಕಾರ್ಯ ನಡೆದಿದೆ. ತಾಲ್ಲೂಕಿನ 12 ಕಡೆ ಗಂಭೀರ ಸಮಸ್ಯೆ ಇರುವ ಪ್ರದೇಶವನ್ನು ಗುರುತಿಸಲಾಗಿದೆ. ಬಿಜ್ಜವಾರದಲ್ಲಿ 10 ಟನ್ ಮೇವು ವಿತರಣೆ ಮಾಡಲಾಗುತ್ತಿದೆ. ಹಸಿರು ಮೇವಿನ ಕೊರತೆ ನೀಗಿಸಲು ಮಿನರಲ್ ಮಿಕ್ಸ್ ಬೀಜ ವಿತರಣೆ ಮಾಡಲಾಗುತ್ತಿದೆ. ಇದರಿಂದ ಲವಣಾಂಶದ ಕೊರತೆ ನೀಗಿಸಬಹುದಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಭೀಮರಾಜ್ ಮಾತನಾಡಿ, ರಾಸುಗಳಿಗೆ ದ್ರಾಕ್ಷಿ ಸೊಪ್ಪು ಹಾಕಲಾಗುತ್ತಿದೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್, ಎ.ಪಿ.ಎಂ.ಸಿ.ನಿರ್ದೇಶಕ ಹುರುಳುಗುರ್ಕಿ ಶ್ರೀನಿವಾಸ್, ಬಿಜ್ಜವಾರ ಆನಂದ್, ಮುಖಂಡರಾದ ನಾರಾಯಣಾಚಾರ್, ಡಾ.ದಿಲೀಪ್, ಆನಂದ್, ರಾಮಕೃಷ್ಣ, ರಾಜಗೋಪಾಲ್, ರೆಡ್ಡಿಹಳ್ಳಿ ಮುನಿರಾಜು, ಡೇರಿ ಅಧ್ಯಕ್ಷ ಬೈಯಣ್ಣ, ಕಾರ್ಯದರ್ಶಿ ಮುನಿರೆಡ್ಡಿ, ವೀರಪ್ಪ, ಕಲ್ಯಾಣ್ ಕುಮಾರ್ ಬಾಬು, ದೇವರಾಜ್. ವೆಂಕಟಗಿರಿಕೋಟೆ ಈರಪ್ಪ, ಮಂಜುನಾಥ್, ರಾಜಸ್ವ ನಿರೀಕ್ಷಕ ಆಂಜಿನಪ್ಪ, ಮೂರ್ತಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.