ADVERTISEMENT

ವಾರಕ್ಕೊಮ್ಮೆ ನೀರು ಪೂರೈಕೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 2:24 IST
Last Updated 23 ಡಿಸೆಂಬರ್ 2020, 2:24 IST
ಆನೇಕಲ್‌ನ ಕಾವೇರಿ ನೀರು ಸಂಗ್ರಹಗಾರಕ್ಕೆ ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ ಭೇಟಿ ನೀಡಿ ಪರಿಶೀಲಿಸಿದರು
ಆನೇಕಲ್‌ನ ಕಾವೇರಿ ನೀರು ಸಂಗ್ರಹಗಾರಕ್ಕೆ ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ ಭೇಟಿ ನೀಡಿ ಪರಿಶೀಲಿಸಿದರು   

ಆನೇಕಲ್: ಪಟ್ಟಣದಲ್ಲಿ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಆದರೆ, ಹಲವು ತಾಂತ್ರಿಕ ಕಾರಣಗಳಿಂದ ನಿಯಮಿತವಾಗಿ ನೀರು ಸರಬರಾಜು ಮಾಡಲಾಗುತ್ತಿಲ್ಲ. ಸಮಸ್ಯೆ ಪರಿಹರಿಸಿ ವಾರಕ್ಕೊಮ್ಮೆ 27 ವಾರ್ಡ್‌ಗಳಿಗೂ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಪುರಸಭಾ ಅಧ್ಯಕ್ಷ ಎನ್‌.ಎಸ್‌. ಪದ್ಮನಾಭ ತಿಳಿಸಿದರು.

ಅವರು ಪಟ್ಟಣದ ಕಾವೇರಿ ನೀರು ಸಂಗ್ರಹಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಪಟ್ಟಣದಲ್ಲಿ ಮೂರು ವರ್ಷಗಳ ಹಿಂದೆ 20 ಲಕ್ಷ ಲೀಟರ್‌ ಸಾಮರ್ಥ್ಯದ ಕಾವೇರಿ ನೀರು ಸಂಗ್ರಹಗಾರ ಸ್ಥಾಪಿಸಲಾಗಿತ್ತು. ಆದರೆ, ಪೈಪ್‌ಲೈನ್‌ ಸಮಸ್ಯೆಯಿಂದಾಗಿ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ತೊಡಕಾಗಿತ್ತು. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಹಾಗಾಗಿ ಇತರೆ ಅಗತ್ಯ ಕಾಮಗಾರಿಗಳನ್ನು ಪೂರ್ಣ ಗೊಳಿಸಿ 15ದಿನದೊಳಗೆ ಪೈಪ್‌ಲೈನ್‌ನಲ್ಲಿ ನೀರು ಪೂರೈಸಲು ಅನುವಾಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಆನೇಕಲ್‌ನಲ್ಲಿ ಕಾವೇರಿ ನೀರು ಪೂರೈಕೆಯಾಗಿದ್ದು ಜಲಮಂಡಳಿಗೆ ಪುರಸಭೆಯಿಂದ ಹಣ ಪಾವತಿ ಮಾಡಬೇಕಾಗಿದೆ. ಜನರು ನೀರಿನ ತೆರಿಗೆ ಮತ್ತು ಆಸ್ತಿ ತೆರಿಗೆಗಳನ್ನು ಸಮರ್ಪಕವಾಗಿ ಪಾವತಿಸಿದರೆ ಮೂಲಸೌಲಭ್ಯ ಕಲ್ಪಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ತೆರಿಗೆ ವಸೂಲಾತಿ ಸಂಬಂಧ ಜಾಗೃತಿ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪುರಸಭೆಯ ಆಡಳಿತದೊಂದಿಗೆ ಸಹಕರಿಸಿ ತೆರಿಗೆ ಪಾವತಿಸುವ ಮೂಲಕ ಅಭಿವೃದ್ಧಿ ಕೊಡುಗೆ ನೀಡಬೇಕು ಎಂದರು.

ಟೌನ್‌ ಕಾಂಗ್ರೆಸ್‌ ಅಧ್ಯಕ್ಷ ಜಿ. ಗೋಪಾಲ್, ಪುರಸಭಾ ಉಪಾಧ್ಯಕ್ಷೆ ಲಲಿತಾ ಲಕ್ಷ್ಮೀನಾರಾಯಣ್, ಸದಸ್ಯರಾದ ಮುನಾವರ್‌, ಕೆ. ಶ್ರೀನಿವಾಸ್, ಮಹಾಂತೇಶ್‌, ಮುಖ್ಯಾಧಿಕಾರಿ ನಿಸಾರ್‌ ಅಹಮದ್‌, ಜಲಮಂಡಳಿ ಸಹಾಯಕ ಎಂಜಿನಿಯರ್‌ಗಳಾದ ಗಾಯತ್ರಿ, ನಾಗರತ್ನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.