ಹೊಸಕೋಟೆ: ‘ದೇಶದಲ್ಲಿ ಅಪೌಷ್ಟಿಕತೆಯಿಂದ ಪ್ರತಿವರ್ಷ ನೂರಾರು ಮಕ್ಕಳು ತೊಂದರೆಗೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ ದೇಶೀಯವಾಗಿ ಬೆಳೆದ ಆಹಾರ ಮತ್ತು ನಮ್ಮ ಸಂಸ್ಕೃತಿಗೆ ಹೊಂದುವ ಆಹಾರ ಸ್ವೀಕರಿಸಬೇಕು’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ ಜಿ. ಸನದಿ ಸಲಹೆ ನೀಡಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.
ವಿದೇಶಿ ವ್ಯಾಮೋಹದಿಂದ ನಮ್ಮದಲ್ಲದ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದೇವೆ. ಅದರಲ್ಲಿ ಯಾವುದೇ ಪೌಷ್ಟಿಕಾಂಶಗಳಿಲ್ಲದ ಕಾರಣ ಮಕ್ಕಳು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರು.
ವಿದೇಶಗಳಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದು ಅದಕ್ಕೆ ಅಲ್ಲಿನ ಆಹಾರ ಪದ್ಧತಿ ಮತ್ತು ರಾಜಕೀಯ ವ್ಯವಸ್ಥೆ ಕಾರಣವಾಗಿದೆ. ಭಾರತ ವಿಶಾಲವಾದ ಫಲವತ್ತಾದ ಭೂ ಪ್ರದೇಶ ಹೊಂದಿದ್ದು, ಅದರ ಉಪಯೋಗವನ್ನು ನಾವು ಮಾಡಿಕೊಳ್ಳಬೇಕಾಗಿದೆ. ಆದರೆ, ನಗರೀಕರಣದ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಹಾಳು ಮಾಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಬಿ. ಗಿರೀಶ್, ಅಂಗನವಾಡಿ ಕಾರ್ಯಕರ್ತೆಯರು ಜನತೆಗೆ ಮಾಡಿರುವ ಸೇವೆಯೂ ನಿಜವಾಗಿ ದೇವರಿಗೆ ಮಾಡಿದ ಸೇವೆಯಂತಿದೆ. ಜನತೆ ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದು
ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಸುಬ್ರಮಣಿ ಮಾತನಾಡಿದರು. ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ,ಸಹಾಯಕ ಸರ್ಕಾರಿ ಅಭಿಯೋಜಕಿ ಎ.ಎಂ. ಚಂದ್ರಕಲಾ, ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾಜು, ಖಜಾಂಚಿ ಶ್ರೀನಿವಾಸ್
ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.