ವಿಜಯಪುರ: ’ಭವಿಷ್ಯದ ದೃಷ್ಟಿಯಿಂದ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ‘ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಹೇಳಿದರು.
ಇಲ್ಲಿನ ಪುರಸಭೆ ಆವರಣದಲ್ಲಿ ಶನಿವಾರ ಪುರಸಭೆ ಹಾಗೂ ಇಲ್ಲಿನ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ಜಲ ಶಕ್ತಿ ಅಭಿಯಾನ 2019 ಜಾಗೃತಿ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ರಕೃತಿಯಲ್ಲಿ ನೀರು, ಪರಿಸರ, ಜೀವ ವೈವಿಧ್ಯ ಹಾಗೂ ಪ್ರಾಣಿ ಸಂಕುಲದ ಸಂರಕ್ಷಣೆ ಅಗತ್ಯ. ನೀರಿನ ಮಿತ ಬಳಕೆಯನ್ನು ಪ್ರೋತ್ಸಾಹಿಸಿ ನೀರಿನ ಮೌಲ್ಯವನ್ನು ಅರ್ಥ ಮಾಡಿಕೊಂಡರೆ ನೀರಿನ ಕೊರತೆ ಅರ್ಧದಷ್ಟು ಬಗೆಹರಿಸಿದಂತಾಗುತ್ತದೆ’ ಎಂದು ಹೇಳಿದರು.
‘ನೀರಿನ ಸಂರಕ್ಷಣೆ ಕುರಿತು ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಜಾರಿಗೊಳಿಸುವ ಕಾರ್ಯಕ್ರಮಗಳ ಅನುಷ್ಠಾನವೂ ಬಹುಮುಖ್ಯವಾಗಿದೆ. ಜಲ ಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಸದ್ಬಳಕೆ, ಹಸಿರೀಕರಣ ಈ ನಾಲ್ಕು ಅಂಶಗಳು ಪಾಲನೆ ಮಾಡಬೇಕಾಗಿದೆ‘ ಎಂದು ಸಲಹೆ ನೀಡಿದರು.
‘ಮಳೆಗಾಲದಲ್ಲಿ ವೃಥಾ ಹರಿದು ಹೋಗುವ ಮಳೆಯ ನೀರನ್ನು ತಡೆದು ಇಂಗಿಸುವ, ಸಂಗ್ರಹಿಸುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚು ಮುತುವರ್ಜಿ ವಹಿಸಬೇಕು. ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗುವ ಪೂರ್ವದಲ್ಲಿಯೇ ಸಮಯೋಚಿತ ಚಿಂತನೆ, ನಿರ್ಧಾರ ಮಾಡದೆ ಹೋದರೆ ಹನಿ ನೀರಿಗೂ ತತ್ವಾರ ಪಡಬೇಕಾದೀತು’ ಎಂದು ವಿಷಾದಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಎಂಜಿನಿಯರ್ ಸುಪ್ರಿಯಾರಾಣಿ, ಪರಿಸರ ಎಂಜಿನಿಯರ್ ಮಹೇಶ್ ಕುಮಾರ್, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ, ಸಮುದಾಯ ಸಂಘಟಕ ಶಿವನಾಗೇಗೌಡ, ಕಿರಿಯ ಕಾರ್ಯಕ್ರಮ ಅಧಿಕಾರಿ ಲಿಂಗಯ್ಯ, ಜನಾರ್ದನ, ಮಮತಾ, ಜ್ಯೋತಿ, ಲಕ್ಷ್ಮೀನಾರಾಯಣ, ನಾರಾಯಣಸ್ವಾಮಿ, ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.