ADVERTISEMENT

‘ಅಂಬೇಡ್ಕರ್‌ ಜಾತ್ಯತೀತ ವ್ಯಕ್ತಿ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 13:45 IST
Last Updated 14 ಏಪ್ರಿಲ್ 2019, 13:45 IST
ವಿಜಯಪುರ ಹೋಬಳಿ ಚಂದೇನಹಳ್ಳಿ ಗೇಟ್‌ನಲ್ಲಿರುವ ಸರ್ವೋದಯ ಸರ್ವಿಸ್ ಸೊಸೈಟಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡರು
ವಿಜಯಪುರ ಹೋಬಳಿ ಚಂದೇನಹಳ್ಳಿ ಗೇಟ್‌ನಲ್ಲಿರುವ ಸರ್ವೋದಯ ಸರ್ವಿಸ್ ಸೊಸೈಟಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡರು   

ವಿಜಯಪುರ: ‘ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಶೇ60ರಷ್ಟು ಮ‌ರೆಯಾಗಿದ್ದು, ಶೇ40ರಷ್ಟು ಮಾತ್ರ ನಮ್ಮ ನಡುವೆ ಇವೆ’ಎಂದು ಹೊಸಕೋಟೆ ಸುಬ್ಬರಾಜು ಕಳವಳ ವ್ಯಕ್ತಪಡಿಸಿದರು.

ಹೋಬಳಿಯ ಚಂದೇನಹಳ್ಳಿ ಗೇಟ್‌ನಲ್ಲಿರುವ ಸರ್ವೋದಯ ಸೇವಾ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಆದರೆ, ಪ್ರಸ್ತುತ ಸಮಾಜದಲ್ಲಿ ಆ ಪ್ರಯತ್ನವೇ ಆಗುತ್ತಿದೆ. ಜತೆಗೆ ಅಂಬೇಡ್ಕರ್ ಅವರ ಬಗ್ಗೆ ಸಮಾಜದಲ್ಲಿ ಕೆಲ ಪೂರ್ವಾಗ್ರಹ ಪೀಡಿತ ವ್ಯಕ್ತಿತ್ವಗಳಿದ್ದು ಅವರ ಹೆಸರಿಗೆ ಧಕ್ಕೆಯಾಗುತ್ತಿದೆ. ಅಂಬೇಡ್ಕರ್‌ವಾದಿ ಎಂದು ಹೇಳುವುದಕ್ಕಿಂತ ಮಿಗಿಲಾಗಿ ಅವರನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.’ ಎಂದು ಹೇಳಿದರು.

ADVERTISEMENT

‘ಇಡೀ ಜಗತ್ತೇ ಅಂಬೇಡ್ಕರ್ ಅವರ ತತ್ವ ಆದರ್ಶ ಅರ್ಥ ಮಾಡಿಕೊಳ್ಳಲು ಮುಂದಾಗಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅವರ ಬಗ್ಗೆ ಉನ್ನತ ಅಧ್ಯಯನ ನಡೆಯುತ್ತಿದೆ. ಅಂಬೇಡ್ಕರ್ ಎಂದರೆ ನುಡಿ. ನುಡಿಗಳ ಮೂಲಕವೇ ಅವರನ್ನು ತಿಳಿಯುವ ಪ್ರಯತ್ನ ಮಾಡಬೇಕು. ಪುಸ್ತಕಗಳ ಮೂಲಕವೇ ಎತ್ತರಕ್ಕೆ ಬೆಳೆದ ಅವರನ್ನು ಸಾವಿರಾರು ಗ್ರಂಥಗಳು ಪ್ರಭಾವಿಸಿದ್ದವು. ಯುವ ಜನರು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದರು.

‘ಅಂಬೇಡ್ಕರ್ ಅವರು ಸ್ತ್ರೀವಾದಿಯಾಗಿಯೂ ತಮ್ಮ ಹೋರಾಟ ಮುಂದುವರಿಸಿದ್ದರು. ಹೆರಿಗೆ ಭತ್ಯೆ, ಹೆರಿಗೆ ರಜೆ, ವಿಧವಾ ವಿವಾಹ, ಆಸ್ತಿ ಹಕ್ಕು ಇರಬೇಕೆಂದು ಮಹಿಳೆಯರ ಪರವಾಗಿ ಹಕ್ಕೊತ್ತಾಯ ಮಂಡಿಸಿದರು. ಅಲ್ಲದೇ, ಮಾನವೀಯ ಮೌಲ್ಯಗಳ ಆಧಾರದಲ್ಲಿ ಸಂವಿಧಾನಾತ್ಮಕ ಚೌಕಟ್ಟು ನಿರ್ಮಿಸಿದರು. ಆದರೂ, ಆ ಚೌಕಟ್ಟಿನ ಅಳವಡಿಕೆ ಸಾಧ್ಯವಾಗಲಿಲ್ಲ. ಜತೆಗೆ ಸಂಸತ್ತಿನಲ್ಲೂ ಅಂಗೀಕಾರವಾಗಲಿಲ್ಲ’ ಎಂದು ವಿಷಾದಿಸಿದರು.

ಸರ್ವಿಸ್ ಸೊಸೈಟಿಯಲ್ಲಿನ ಅಂಗವಿಕಲ ಮಕ್ಕಳು, ವೃದ್ಧರಿಗೆ ಅಂಬೇಡ್ಕರ್ ಜಯಂತಿ ಅಂಗವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ಗೊಡ್ಲುಮುದ್ದೇನಹಳ್ಳಿ ಮುನಿರಾಜು, ವೆಂಕಟೇಶ್ ಪ್ರಭು, ರಾಘವ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.