ಆನೇಕಲ್: ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಮ್ಮನ ದೊಡ್ಡಿ ಕೆರೆಯಲ್ಲಿ ಶನಿವಾರ ಮೀನುಗಳ ಮಾರಣಹೋಮವಾಗಿದ್ದು, ತ್ಯಾಜ್ಯ ಮತ್ತು ಕಲುಷಿತ ನೀರಿನಿಂದಾಗಿ ಮೀನುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.
ಮೈಸೂರಮ್ಮನ ದೊಡ್ಡಿಯ ಕೆರೆಯಲ್ಲಿ ಅಪಾರ್ಟ್ಮೆಂಟ್ಗಳ ತ್ಯಾಜ್ಯ ನೀರು ಮತ್ತು ಕಲುಷಿತ ನೀರು ಹರಿದಿದ್ದರಿಂದ ಮೀನುಗಳು ಮರಣ ಹೊಂದಿವೆ ಎಂದು ಶಂಕಿಸಲಾಗಿದೆ. ನೂರಾರು ಮೀನುಗಳು ಕೆರೆಯಲ್ಲಿ ಮೃತಪಟ್ಟಿವೆ. ಸ್ಥಳೀಯರು ಮೀನುಗಳು ಕೆರೆಯಿಂದ ಹೊರ ತೆಗೆಯುತ್ತಿದ್ದ ದೃಶ್ಯ ಕಂಡು ಬಂದಿತು.
ಮೀನುಗಳ ಮಾರಣಹೋಮದಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಮೈಸೂರಮ್ಮನ ದೊಡ್ಡಿ ಕೆರೆಯು ಜಿಗಣಿ ಕೈಗಾರಿಕೆಗೆ ಸಮೀಪದಲ್ಲಿದೆ. ಕೆರೆಗೆ ತ್ಯಾಜ್ಯ ಮತ್ತು ಕಲುಷಿತ ನೀರು ಹರಿಯುತ್ತಿರುವುದರಿಂದ ಕೆರೆಯು ಜಲಚರಗಳ ಮೃತ್ಯೂಕೂಪವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮೈಸೂರಮ್ಮನ ದೊಡ್ಡಿ ಕೆರೆಯು ಸುತ್ತಮುತ್ತಲ ಕೃಷಿ ಜಮೀನುಗಳಿಗೆ ಜಲಮೂಲವಾಗಿತ್ತು. ಜಾನುವಾರುಗಳಿಗೆ ನೀರು ನೀಡುತ್ತಿತ್ತು. ಆದರೆ ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಮೀನುಗಳು ಸತ್ತಿವೆ. ಮೀನುಗಳು ಸತ್ತಿರುವುದರಿಂದ ಸುತ್ತಮುತ್ತ ದುರ್ವಾಸನೆ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.