ಆನೇಕಲ್: ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಹೊಸಹಳ್ಳಿಯಲ್ಲಿ ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ವತಿಯಿಂದ ‘ಸಾಮಾಜಿಕ ಪರಿವರ್ತನೆಗೆ ಹಳ್ಳಿಗೆ ಪಯಣ, ಮಾತು–ಚರ್ಚೆ ಮತ್ತು ಹಾಡು, ಸಂವಾದ’ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಹಿಳಾ ಸಬಲೀಕರಣ, ಜಾತಿ, ಅಜ್ಞಾನ, ದ್ವೇಷ ಕೋಪದಿಂದಾಗುವ ದುಷ್ಪರಿಣಾಮಗಳು ಮತ್ತು ಇದರಿಂದ ಉಂಟಾಗುವ ಸಾಮಾಜಿಕ ಅಪಾಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮಹಿಳೆಯರ ಮನಸ್ಸುಗಳನ್ನು ವೈಜ್ಞಾನಿಕ ಚಿಂತನೆಗಳತ್ತ ತರಬೇಕೆಂಬುದು ಸಂವಾದದ ಉದ್ದೇಶವಾಗಿದೆ ಎಂದು ವಕೀಲ ಆನಂದ ಚಕ್ರವರ್ತಿ ತಿಳಿಸಿದರು.
ಚಿಂತಕ ಯೋಗೇಶ್ ಮಾಸ್ಟರ್ ಮಾತನಾಡಿ ಮಹಿಳಾ ಸಬಲೀಕರಣ ಇತ್ತೀಚಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ವತಿಯಿಂದ ಗ್ರಾಮ ಗ್ರಾಮಗಳಲ್ಲಿ ಸಂವಾದ ಕಾರ್ಯಕ್ರಮದ ಮೂಲಕ ಮಹಿಳಾ ಸಬಲೀಕರಣ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮಹಿಳಾ ಸಬಲೀಕರಣದ ಮೂಲ ಅರ್ಥ ಸ್ವಯಂಪ್ರಜ್ಞೆ, ಸ್ವಯಂ ಜಾಗೃತಿ ಮತ್ತು ಸ್ವಾವಲಂಬನೆ ಸಾಧಿಸುವುದಾಗಿದೆ. ಹಾಗಾಗಿ ಮಹಿಳೆಯರು ಕೌಶಲ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ರಾವಣ, ಸುರೇಶ್, ಭೂತ ನಂದಕುಮಾರ್, ರಾಜೇಶ್ ಮಂಜು, ಶರತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.