ADVERTISEMENT

ದೊಡ್ಡಬಳ್ಳಾಪುರ: ಭೂಸ್ವಾಧಿನಕ್ಕೆ ಕೆಐಎಡಿಬಿ ನೋಟಿಸ್‌: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 21:00 IST
Last Updated 21 ಏಪ್ರಿಲ್ 2022, 21:00 IST

ದೊಡ್ಡಬಳ್ಳಾಪುರ: ಐದನೇ ಹಂತದ ಕೈಗಾರಿಕಾವಲಯ ಸ್ಥಾಪನೆಗೆ ಭೂಮಿ ಸ್ವಾಧೀನಕ್ಕೆಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ನೀಡಿದ್ದ ನೋಟಿಸ್‌ನಿಂದ ಮನನೊಂದ ಕೊನಘಟ್ಟ ಗ್ರಾಮದ ರೈತ ಹನುಮಂತೇಗೌಡ (60) ಗುರುವಾರ ಜಮೀನಲ್ಲಿರುವ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾದಾಗಿನಿಂದಹನುಮಂತೇಗೌಡ ಮನನೊಂದಿದ್ದರು. ಪ್ರಾಣ ಕೊಟ್ಟಾದರೂ ಸರಿ, ಹಿರಿಯರ ಭೂಮಿ ಉಳಿಸಿಕೊಳ್ಳುತ್ತೇನೆ ಎಂದು ಹೇಳುತಿದ್ದರು. ಕೊನೆಗೆ ಕೆಐಎಡಿಬಿ ನೋಟಿಸ್ ಜೇಬಿನಲ್ಲಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಕೊನಘಟ್ಟ ಗ್ರಾಮದ ಬಾಬು ತಿಳಿಸಿದರು.

ತಾಲ್ಲೂಕಿನ ಕೊನಘಟ್ಟ, ಆದಿನಾರಾಯಣ ಹೊಸಹಳ್ಳಿ ಸುತ್ತ ಮುತ್ತ ಸುಮಾರು 800 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ರೈತರಿಗೆ ನೋಟಿಸ್ ನೀಡುತ್ತಿದೆ. ಕೈಗಾರಿಕಾ ವಲಯ ಸ್ಥಾಪನೆಗೆ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಬಹುತೇಕ ಜಮೀನುಗಳು ಫಲವತ್ತಾಗಿದ್ದು ದ್ರಾಕ್ಷಿ, ತೆಂಗು ಹಾಗೂ ತರಕಾರಿ ಬೆಳೆಯಲಾಗುತ್ತಿದೆ.

ADVERTISEMENT

ಸ್ಥಳದಲ್ಲೇ ಪ್ರತಿಭಟನೆ: ರೈತರಿಂದ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ರೈತರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರುಹನುಮಂತೇಗೌಡ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಮುಂದಿನ ವಾರ ತಾಲ್ಲೂಕಿನ ಎಲ್ಲ ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳ ಜತೆ ಸಭೆ ನಡೆಸಿ ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸುವಂತೆ ಪ್ರತಿಭಟನೆ ಆರಂಭಿಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಆತ್ಮಹತ್ಯೆಗೆ ಶರಣಾಗಿರುವ ಹನುಮಂತೇಗೌಡ ಅವರಿಗೆ ಪತ್ನಿ, ನಾಲ್ವರು ಪುತ್ರಿಯರಿದ್ದು, ಎರಡೂವರೆ ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯುತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.