ಆನೇಕಲ್: ಜಗತ್ತು ಹುಚ್ಚರ ಸಂತೆಯಾಗುತ್ತಿದೆ. ಈ ಹುಚ್ಚು ಕಡಿಮೆಯಾಗಲು ಅವಧೂತರು, ಶರಣದ ಚಿಂತನೆಗಳು ಅವಶ್ಯಕವಾಗಿದೆ. ಭಕ್ತಿ ಮಾರ್ಗದಿಂದ ಮಾತ್ರ ಸಮಾಜದ ಬದಲಾವಣೆ ಮತ್ತು ಮುಕ್ತಿ ಪಡೆಯಬಹುದು ಎಂದು ಹೊನ್ನಲವಾಡಿಯ ರತ್ನಕುಮಾರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಾಯಸಂದ್ರದಲ್ಲಿ ಶುಕ್ರವಾರ ನಡೆದ ಸಚ್ಚಿದಾನಂದ ಅವಧೂತ ಪಿಳ್ಳಪ್ಪಸ್ವಾಮಿ ಅವರ 62ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಜನರು ಭಕ್ತಿ ಮಾರ್ಗಕ್ಕೆ ಬೆಂಬಲ ನೀಡಬೇಕು. ಸಜ್ಜನ ಜೀವನ ನಡೆಸಲು ಪ್ರತಿಯೊಬ್ಬರು ಸಿದ್ಧರಾಗಬೇಕು. ಸೇವೆ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳು. ಹಾಗಾಗಿ ಧಾರ್ಮಿಕ ಕಾರ್ಯಗಳಿಗೆ ಭೇಟಿ ನೀಡಿದಾಗ ಸೇವೆ ಮಾಡಬೇಕು. ಧಾರ್ಮಿಕ ಕ್ಷೇತ್ರದಲ್ಲಿ ಮಾಡುವ ಸೇವೆ ಅತ್ಯಂತ ಪವಿತ್ರವಾದುದ್ದು. ಹೆಸರಿನಿಂದ ಮಹಾತ್ಮರಾಗುವ ಬದಲು ಸೇವೆ ಮತ್ತು ಕೆಲಸದಿಂದ ಮಹಾತ್ಮರಾಗಬೇಕು, ಉತ್ತಮರಾಗಬೇಕು ಎಂದರು.
ಹೊಸೂರು ತಾತಯ್ಯನವರ ಮಠದ ವೆಂಕಟೇಶ್ವರ ಸ್ವಾಮೀಜಿ ಮಾತನಾಡಿ, ಮಾನವ ಜನ್ಮ ಅತ್ಯಂತ ಪವಿತ್ರವಾದುದ್ದು, ಈ ಜನ್ಮದಲ್ಲಿ ಧರ್ಮದ ಕಾರ್ಯ ಮೂಲಕ ಉತ್ತಮರಾಗಬೇಕು. ಇಲ್ಲವಾದಲ್ಲಿ ಶ್ರೇಷ್ಠ ಜನ್ಮ ವ್ಯರ್ಥವಾಗುತ್ತದೆ. ತತ್ವ ಸಿದ್ಧಾಂತದ ಜೀವನ ನಡೆಸಬೇಕು ಎಂಬುದು ಪಿಳ್ಳಪ್ಪ ಸ್ವಾಮಿಗಳ ಆಶಯವಾಗಿತ್ತು. ಅವರ ಆಶಯ ಈಡೇರಿಸಬೇಕಾದುದ್ದು ನಮ್ಮ ಕಾಯಕವಾಗಿದೆ. ಈ ನಿಟ್ಟಿನಲ್ಲಿ ಅವರ ವಿಚಾರಧಾರೆಗಳನ್ನು ಪ್ರಚಾರ ಪಡಿಸಬೇಕು ಎಂದು ಹೇಳಿದರು.
ಪಿಳ್ಳಪ್ಪಸ್ವಾಮಿ ಆಶ್ರಮದ ಅಧ್ಯಕ್ಷ ಎಂ.ವಿ.ಮಂಜುನಾಥ್ ಮಾತನಾಡಿದರು. ಶಾಸಕ ಬಿ.ಶಿವಣ್ಣ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಪ್ಪ, ದೇವಾಲಯ ಟ್ರಸ್ಟ್ನ ಮಂಜುನಾಥ್, ನರಸಿಂಹಮೂರ್ತಿ, ರಾಮಕೃಷ್ಣ ಸ್ವಾಮೀಜಿ, ಬಾಬುರೆಡ್ಡಿ, ಗಿರಿಜಾ ಮಾತಾಜಿ, ರಾಮಕೋಟೀಶ್ವರ ಸ್ವಾಮೀಜಿ, ರಾಜಮ್ಮ, ಚಿಕ್ಕಹಾಗಡೆ ರಾಜಪ್ಪ, ಸಚ್ಚಿದಾನಂದ ಸೀನಪ್ಪ, ಕೃಷ್ಣಪ್ಪ, ಭೈರಪ್ಪ, ಮುಖಂಡರಾದ ಮುನಿಯಪ್ಪ, ರಾಮಸ್ವಾಮಿ, ನಾಗರಾಜು, ಸಂಪಂಗಿ, ಗೋವಿಂದಪ್ಪ ಇದ್ದರು.
ಸಾಧು ಸಂತರ ಸಮಗಮಾ
ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಮಂದಿ ಸಾಧು ಸಂತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು. ದೇವರ ಭಕ್ತಿ ಗೀತೆ ಸತ್ಸಂಗ ಕಾರ್ಯಕ್ರಮ ನಡೆಯಿತು. ಸಾಧುಗಳು ಮಾಯಸಂದ್ರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಜನೆ ಹಾಡಿದರು. ಆಶ್ರಮದ ಆವರಣದಲ್ಲಿ ಸಾಧು ಸಂತರು ತುಂಬಿದ್ದರು. ಭಕ್ತರು ಸಂತರ ಬಳಿ ಆಶೀರ್ವಾದ ಪಡೆಯಲು ಮುಗಿ ಬಿದ್ದಿದ್ದರು. ಮಹಿಳೆಯರು ಆಕರ್ಷಕ ಕೋಲಾಟ ಪ್ರದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.