ADVERTISEMENT

ಬಾಳೆಹಣ್ಣಿನ ಆಯುರ್ವೇದ ಔಷಧ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 12:25 IST
Last Updated 12 ಡಿಸೆಂಬರ್ 2019, 12:25 IST
ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಬಾಳೆಹಣ್ಣಿನ ಔಷಧಿ ವಿತರಿಸಲಾಯಿತು
ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಬಾಳೆಹಣ್ಣಿನ ಔಷಧಿ ವಿತರಿಸಲಾಯಿತು   

ದೊಡ್ಡಬಳ್ಳಾಪುರ: ‘ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ಔಷಧಿಗಳಿಂದ ಉತ್ತಮ ಆರೋಗ್ಯ ಪಡೆಯಬಹುದು. ಬಾಳೆಹಣ್ಣಿನ ಆಯುರ್ವೇದ ಔಷಧಿ ಈ ದಿಸೆಯಲ್ಲಿ ಪರಿಣಾಮಕಾರಿಯಾಗಿದೆ’ ಎಂದು ಆಯುಷ್ ನಿರ್ದೇಶನಾಲಯದ ಯೋಜನಾಧಿಕಾರಿ ಡಾ.ಮುರಳಿಕೃಷ್ಣ ಹೇಳಿದರು.

ಇಲ್ಲಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯಿಂದ ನಡೆದ ಅಸ್ತಮ ಸಂಬಂಧಿತ ರೋಗಗಳಿಗೆ ಬಾಳೆಹಣ್ಣಿನ ಆಯುರ್ವೇದ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಾತಾವರಣದಲ್ಲಿ ಹೆಚ್ಚಿನ ತೇವಾಂಶದಿಂದಾಗಿ ಮನುಷ್ಯನ ಉಸಿರಾಟದಲ್ಲಿ ಏರುಪೇರಾಗುತ್ತದೆ. ನೆಗಡಿ, ಕೆಮ್ಮು ಹಾಗೂ ಇತ್ಯಾದಿ ಅಲರ್ಜಿ ಸಹ ಆರಂಭವಾಗುವ ಸಾಧ್ಯತೆ ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ ಆಯುರ್ವೇದ ಅತ್ಯಂತ ಸುಲಭ ಹಾಗೂ ಶಾಶ್ವತವಾಗಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ’ ಎಂದರು.

ADVERTISEMENT

ಔಷಧಿ ಸೇವಿಸುವ ವಿಧಾನ:‘ವರ್ಷಕ್ಕೆ ಒಮ್ಮೆ ನೀಡುವ ಬಾಳೆ ಹಣ್ಣಿನ ಔಷಧ ಹುಣ್ಣಿಮೆಯಂದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಔಷಧವನ್ನು ರಾತ್ರಿ, ತಾರಸಿಯ ಮೇಲೆ ಸೂಕ್ತ ಬಂದೋಬಸ್ತ್‌ನಲ್ಲಿರಿಸಬೇಕು. ಚಂದ್ರನ ಬೆಳದಿಂಗಳ ಕಿರಣಗಳು ಹಣ್ಣಿನ ಮೇಲೆ ಬೀಳುವಂತಿರಬೇಕು. ಔಷಧಿ ಸೇವಿಸುವವರಿಗೆ ಬಾಳೆಹಣ್ಣನ್ನು ಕುಟುಂಬದ ಸದಸ್ಯರು ಹಾಸಿಗೆ ಬಳಿಯೇ ತಂದು ನೀಡಬೇಕು. ಬೆಳಿಗ್ಗೆ ಹಾಸಿಗೆಯಲ್ಲಿಯೇ ಕಣ್ಣನ್ನು ತೆರೆಯದೆ ನೆಲಕ್ಕೆ ಕಾಲು ಊರದೆ, ಒಂದೇ ಬಾರಿಗೆ ತೆಗೆದುಕೊಳ್ಳಬೇಕು. ಔಷಧಕ್ಕೆ ಚಂದ್ರನ ಕಿರಣಗಳಿಂದ ಮಹತ್ವದ ಸತ್ವ ಬರುತ್ತದೆ. ಈ ವೇಳೆ ಮಾತನಾಡಬಾರದು. ಔಷಧ ಸೇವಿಸಿದ ನಂತರ ಶೀತದ ಪದಾರ್ಥಗಳನ್ನು ತಿನ್ನಬಾರದು. ವೈದ್ಯರು ನೀಡಿರುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು’ ಎಂದರು.

ಆಯುಷ್ ಆಸ್ಪತ್ರೆ ವೈದ್ಯರಾದ ಡಾ.ಪುಷ್ಪಲತ, ಡಾ.ಸರಿತಾ, ಡಾ.ಮುರಳಿಧರ್ ಆಯುರ್ವೇದ ಆಸ್ಪತ್ರೆಯ ನಿರ್ವಾಹಕ ಕೇಶವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.