ಸೂಲಿಬೆಲೆ: ಎಸ್ಸೆಸ್ಸಲ್ಸಿ ವಿಷಯಗಳ ಪ್ರತ್ಯೇಕ ಆನ್ಲೈನ್ ಪರೀಕ್ಷೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೂನ್ 8ರಿಂದ ಪ್ರಾರಂಭಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆನ್ಲೈನ್ ಸಿದ್ಧತಾ ಪರೀಕ್ಷೆ ಭೂತವಾಗಿ ಕಾಡುತ್ತಿದೆ.
ಆನ್ಲೈನ್ ಕಲಿಕೆ ಬಗ್ಗೆ ಮೂಲಸೌಕರ್ಯ, ತಂತ್ರಜ್ಞಾನ ಹಾಗೂ ಸಂಪನ್ಮೂಲಗಳ ಲಭ್ಯತೆಗೆ ಸಂಬಂಧಪಟ್ಟಂತೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಮತ್ತೊಂದಡೆ ಕೊರೊನಾ ಸಂಕಷ್ಟದಲ್ಲಿ ಆನ್ಲೈನ್ ಕಲಿಕೆ ಅನಿವಾರ್ಯ ಎಂದು ಇಲಾಖೆ ಆದೇಶ ಹೊರಡಿಸಿದೆ. ಸಿದ್ಧತಾ ಪರೀಕ್ಷೆಯಲ್ಲಿ ಶೇ39.9ರಷ್ಟು ವಿದ್ಯಾರ್ಥಿಗಳು ಮಾತ್ರಭಾಗವಹಿಸಿದ್ದಾರೆ.
ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಆನ್ ಲೈನ್ ಲಿಂಕ್ ವಿದ್ಯಾರ್ಥಿಗಳ ವಾಟ್ಸ್ಆ್ಯಪ್ಗೆ ಕಳುಸಲಾಗಿದೆ. ಈ ಲಿಂಕ್ ಬಳಸಿ ವಿದ್ಯಾರ್ಥಿಗಳು ತಮ್ಮ ಮಾಹಿತಿ ತುಂಬಿ ನಂತರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನೆಟ್ವರ್ಕ್ ಸಮಸ್ಯೆ, ಸುಧಾರಿತ ತಂತ್ರಜ್ಞಾನದ ಮೊಬೈಲ್ಗಳು ಇಲ್ಲದಿರುವುದು ಅಡ್ಡಿಯಾಗಿದೆ.
ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 13,252 ವಿದ್ಯಾರ್ಥಿಗಳಲ್ಲಿ ಕೇವಲ 5,289 ವಿದ್ಯಾರ್ಥಿಗಳು ಮಾತ್ರ ‘ಆನ್ ಲೈನ್’ ಪರೀಕ್ಷೆಗೆ ಹಾಜರಾಗಿದ್ದಾರೆ.ಇದರಲ್ಲಿ ಹೆಚ್ಚು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಶೇ 63.66 ಇದ್ದಾರೆ.
ಕನ್ನಡ ಮಾಧ್ಯಮ ಶೇ 35.83 ಹಾಗೂ ಉರ್ದು ಮಾಧ್ಯಮ 0.51 ವಿದ್ಯಾರ್ಥಿಗಳಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ಕಲಿಕೆ ಗಗನ ಕುಸುಮವಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಕಡ್ಡಾಯ ಆತಂಕ:ಸಿದ್ಧತಾ ಪರೀಕ್ಷೆ ಕಡ್ಡಾಯವಾಗಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.