ADVERTISEMENT

ಪ್ರಜಾಸತ್ತೆ ಉಳಿಸಿದ ಬಸವಣ್ಣ

23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಬಸವರಮಾನಂದ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 2:54 IST
Last Updated 4 ಜನವರಿ 2021, 2:54 IST
ವಿಜಯಪುರದ ಗಾಂಧಿಚೌಕದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿ ಅವರ ಮಂಟಪದಲ್ಲಿ ಏರ್ಪಡಿಸಿದ್ದ 23ನೇ ಜಿಲ್ಲಾ ಮಟ್ಟದ ಕಸಾಪ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿದ್ದ ವನಕಲ್ಲು ಮಲ್ಲೇಶ್ವರ ಸಂಸ್ಥಾನ ಪೀಠಾಧ್ಯಕ್ಷ ಡಾ.ಬಸವರಮಾನಂದಸ್ವಾಮೀಜಿ ಅವರು ನಾಣ್ಯ ಪ್ರದಶರ್ನವನ್ನು ಉದ್ಘಾಟಿಸಿದರು.
ವಿಜಯಪುರದ ಗಾಂಧಿಚೌಕದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿ ಅವರ ಮಂಟಪದಲ್ಲಿ ಏರ್ಪಡಿಸಿದ್ದ 23ನೇ ಜಿಲ್ಲಾ ಮಟ್ಟದ ಕಸಾಪ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿದ್ದ ವನಕಲ್ಲು ಮಲ್ಲೇಶ್ವರ ಸಂಸ್ಥಾನ ಪೀಠಾಧ್ಯಕ್ಷ ಡಾ.ಬಸವರಮಾನಂದಸ್ವಾಮೀಜಿ ಅವರು ನಾಣ್ಯ ಪ್ರದಶರ್ನವನ್ನು ಉದ್ಘಾಟಿಸಿದರು.   

ವಿಜಯಪುರ: 12ನೇಶತಮಾನದಲ್ಲಿ ಕ್ರಾಂತಿಯೋಗಿ ಬಸವಣ್ಣ ಪ್ರಜಾಸತ್ತೆ ಉಳಿಸುವ ಬೆಳೆಸುವ ಕಾರ್ಯ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಸಂವಿಧಾನ 12ನೇ ಶತಮಾನದಲ್ಲಿ ಬಸವಣ್ಣ ಅವರು ಜಾತಿ, ಮತ ಎಂಬ ಬೇಧ ಎಣಿಸದೆ ಸಮಾನತೆ ಸಾರುವಂತಹ ಕಾರ್ಯ ಮಾಡಿದ್ದಾರೆ ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಪೀಠಾಧ್ಯಕ್ಷ ಡಾ.ಬಸವರಮಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಗಾಂಧಿಚೌಕದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಮಂಟಪದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಆಯೋಜಿಸಿದ್ದ 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಅವರುಮಾತನಾಡಿದರು.

ಬಸವಣ್ಣ ಅವರು ಸ್ಥಾಪಿಸಿದ್ದ ಅಂದಿನ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ನುಲಿಯ ಚಂದಯ್ಯ, ಸಮಗಾರ ಹರಳಯ್ಯ, ಅಕ್ಕಮಹಾದೇವಿ, ಸತ್ಯಕ್ಕ, ರೇವಮ್ಮ, ಮುಂತಾದ ಶರಣ ಪರಂಪರೆಯೊಂದಿಗೆ ಕನ್ನಡ ಸಾಹಿತ್ಯ ಬೆಳೆಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ADVERTISEMENT

ಕನ್ನಡ ಸಾಹಿತ್ಯ ಮುಂದೆ ಕರ್ನಾಟಕ ಸಂಗೀತದ ಪಿತಾಮಹ ಎಂದು ಪ್ರಖ್ಯಾತಿ ಗಳಿಸಿದ್ದ ಪುರಂದರದಾಸರು ಹಾಗೂ ಕನಕದಾಸರಿಂದ ಉಜ್ವಲವಾಯಿತು. ನಂತರ ದಲಿತ ಸಾಹಿತ್ಯ ಬಂಡಾಯ ಸಾಹಿತ್ಯವಾಗಿ ರೂಪುಗೊಂಡಿತು. ಇವೆಲ್ಲದರ ನಡುವೆಯೂ ಬರಹವಿಲ್ಲದೇ, ಗ್ರಾಮೀಣ ಜನರಿಂದ ಜನಪದವಾಗಿ ಹಾಡಿದ ನುಡಿಗಳೇ ಜನಪದ ಸಾಹಿತ್ಯವಾಗಿ ಜನಪ್ರಿಯಗೊಂಡಿತೆಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಕಿಶೋರ್ ಕುಮಾರ್, ಜ್ಯೋತೀಶ್ವರಪ್ಪ. ಪ್ರಕಾಶ್, ಹಾಗೂ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖಂಡ ಎಸ್.ಭಾಸ್ಕರ್, ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ನಿರ್ದೇಶಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪುನೀತಾ ನಟರಾಜ್, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ, ಜಿಲ್ಲಾ ಕಾರ್ಯದರ್ಶಿ ಎಂ.ಶಿವಕುಮಾರ್, ಜಿಲ್ಲಾ ಕಸಾಪ ಕಾರ್ಮಿಕ ಘಟಕದ ಅಧ್ಯಕ್ಷ ಚೌಡೇಗೌಡ, ಹೊಸಕೋಟೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಡಿ.ಎನ್.ಮೂರ್ತಿ, ಟೌನ್ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ವಿಶ್ವನಾಥ್, ಮುನಿವೆಂಕಟರಮಣಪ್ಪ ಇತರರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.