ದೇವನಹಳ್ಳಿ: 12ನೇ ಶತಮಾನದಲ್ಲಿ ಸಮಾನತೆಗಾಗಿ ಹೋರಾಡಿದ ಬಸವಣ್ಣ ಅವರ ಪುತ್ಥಳಿ ಸ್ಥಾಪನೆ ಅನಿವಾರ್ಯ ಎಂದು ಕೆಪಿಸಿಸಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
ಕೋಡಿಮಂಚೆನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ವೀರಶೈವ ಲಿಂಗಾಯುತ ಸಮಾಜದ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಬಸವಣ್ಣ ಅವರ ಜಾತ್ಯತೀತ ತಳಹದಿಯ ಮೇಲೆ ಸಂವಿಧಾನ ರಚಿಸಲಾಗಿದೆ. ವೀರಶೈವ ಲಿಂಗಾಯುತ ಧರ್ಮದ ಮೂಲ ಪುಣ್ಯ ಪುರುಷ. ಇವರ ಪ್ರತಿಮೆ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡುವ ಜಾಗದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಪುಟ ದರ್ಜೆ ಸಚಿವರೊಂದಿಗೆ ಚರ್ಚಿಸಿ ಸಮುದಾಯಕ್ಕೆ ಪ್ರತ್ಯೇಕ ಒಂದು ಎಕರೆ ಜಾಗ ಮತ್ತು ಪ್ರತಿಷ್ಠಾಪನೆಗೆ ಅವಕಾಶ ಮಾಡಿ ಕೊಡಲಾಗುವುದೆಂದು ಭರವಸೆ ನೀಡಿದರು.
‘ನಾನು ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಹಾದಿಯಲ್ಲೇ ನಡೆಯುತ್ತಿದ್ದೇನೆ. ನನ್ನ ಅರ್ಹತೆ ನೋಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೆ.ಪಿ.ಸಿ.ಸಿ ರಾಜ್ಯ ಕಾರ್ಯಾಧ್ಯಕ್ಷ ಸ್ಥಾನ ನೀಡಿದೆ. ಸಮುದಾಯದಲ್ಲಿ ಕೆಲವೊಮ್ಮೆ ವಿರೋಧ ವ್ಯಕ್ತವಾಗುತ್ತದೆ. ಆದರೆ, ಸಮುದಾಯದಲ್ಲಿ ಒಗ್ಗಟ್ಟು ಮುಖ್ಯ’ ಎಂದು ಹೇಳಿದರು.
ರಾಜ್ಯ ವಿಜ್ಞಾನ ಕೇಂದ್ರ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ದೇಶವನ್ನು ಅನೇಕ ರಾಜ ಮಹಾರಾಜರು ಆಳ್ವಿಕೆ ನಡೆಸಿದ್ದಾರೆ. ರಾಜರು ಜನರಿಗೆ ಸ್ಪಂದಿಸಿದರೂ ಅನ್ನ, ಶಿಕ್ಷಣ, ವಸತಿ ತ್ರಿವಿಧ ದಾಸೋಹ ನೀಡಿದ ಇತಿಹಾಸವಿಲ್ಲ. ಅಂತಹ ಇತಿಹಾಸವನ್ನು 17 ಮತ್ತು 18ನೇ ಶತಮಾನದಿಂದಲೇ ಲಿಂಗಾಯುತ ಧರ್ಮಪೀಠ ಮಠಗಳು ನಡೆಸಿಕೊಂಡು ಬರುತ್ತಿವೆ. ಜಿಲ್ಲೆಯಲ್ಲಿ ಸಮುದಾಯದ ಸಾಂಸ್ಕೃತಿಕ ನೆಲೆಗಟ್ಟು ಇನ್ನಷ್ಟ ಗಟ್ಟಿಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನ ಆವರಣದಲ್ಲಿ ಬಸವಣ್ಣರ ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟರೆ ಸಮುದಾಯ ಸ್ವಂತ ವೆಚ್ಚದಲ್ಲಿ ಸಿದ್ಧತೆ ಮಾಡಿಕೊಳ್ಳಲಿದೆ ಎಂದರು .
ವೀರಶೈವ ಲಿಂಗಾಯುತ ಸಮುದಾಯದ ಮುಖಂಡ ಎಂ.ವೀರಭದ್ರಪ್ಪ, ಎಂ.ಎಸ್ ಉಮೇಶ್, ಎಂ.ಕುಮಾರ್, ವಿರೂಪಾಕ್ಷಪ್ಪ, ಕೆ.ವಿ.ವೀರಭದ್ರಪ್ಪ, ಸದಾಶಿವಯ್ಯ, ಬಿ.ಎಸ್.ಉಮೇಶ್, ಪರಶಿವರಾಧ್ಯ, ಸೋಮಶೇಖರಾಧ್ಯ, ಅವತಿ ಸದಾಶಿವರಾಧ್ಯ, ವೀರಶೈವ ಲಿಂಗಾಯುತ ಸಮಾಜ ತಾಲ್ಲೂಕು ಅಧ್ಯಕ್ಷ ಎಂ.ಎಸ್.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಕಾಂತರಾಜು, ಸದಸ್ಯೆ ನಳಿನಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.