
ಆನೇಕಲ್: ಆನೇಕಲ್ ಅನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರಿಸುವ ಮೊದಲು ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ರಸ್ತೆ ದಟ್ಟನೆ, ರಸ್ತೆಗಳ ಅಭಿವೃದ್ಧಿಗಳ ಬಗ್ಗೆ ಸುದೀರ್ಘ ದತ್ತಾಂಶ ಪಡೆದು ಕಾರ್ಯನಿರ್ವಹಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಚಂದಾಪುರದಲ್ಲಿ ಬಿಜೆಪಿ ಪದಾಧಿಕಾರಿಗಳ ಆಯ್ಕೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ಪಷ್ಟತೆ ಇಲ್ಲ. ಕಾರಿನಲ್ಲಿ ಬಂದು ಎಲ್ಲೋ ಒಂದು ಕಡೆ ನಿಂತು ಮಾತನಾಡಿದರೆ ಯಾವುದೇ ಉಪಯೋಗವಿಲ್ಲ ಎಂದರು.
ಆನೇಕಲ್ ತಾಲ್ಲೂಕಿನ ಅಭಿವೃದ್ಧಿ, ಆಡಳಿತ ಯಂತ್ರ ಕುಸಿತದ ಬಗ್ಗೆ ಬಿಜೆಪಿ ಕಾರ್ಯಕರ್ತರು ಧ್ವನಿ ಎತ್ತಲಿದ್ದಾರೆ. ಹೋರಾಟಗಳ ಮೂಲಕ ಸಂಘಟನೆ ಬಲಪಡಿಸಲಾಗುವುದು ಎಂದರು.
ದಿಕ್ಕು ತಪ್ಪಿಸಲು ಆರ್ಎಸ್ಎಸ್ ವಿಚಾರ: ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೋಂದಣಿಯಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಬಲ ನೀಡಿದ್ದೇ ರಾಷ್ಟ್ರೀಯ ಸ್ವಯಂ ಸೇವಾ ಸಂಘ. ಈಗಿರುವ ಯಾವುದೇ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ. ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಬಗ್ಗೆ ಅನೇಕ ವ್ಯಾಖ್ಯಾನ ನೀಡಿದ್ದಾರೆ. ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನವನ್ನು ನಿಷೇಧ ಮಾಡಲು ಖರ್ಗೆ ಅವರು ಮುಂದಾಗಿದ್ದಾರೆ. ಆರ್ಎಸ್ಎಸ್ ದೇಶಪ್ರೇಮ ಹುಟ್ಟುಹಾಕುವ ಸಂಸ್ಥೆಯಾಗಿದೆ. ಅಭಿವೃದ್ಧಿಯ ವಿಚಾರಗಳನ್ನು ದಿಕ್ಕು ತಪ್ಪಿಸಲು ಸರ್ಕಾರ ಆರ್ಎಸ್ಎಸ್ ವಿಷಯವನ್ನು ಮುನ್ನೆಲೆಗೆ ತಂದಿದೆ ಎಂದು ಹೇಳಿದರು.
ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ.ರಾಮಮೂರ್ತಿ, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಹುಲ್ಲಹಳ್ಳಿ ಶ್ರೀನಿವಾಸ್, ಮುಖಂಡರಾದ ಶಿವಪ್ಪ, ಜಯಪ್ರಕಾಶ್, ದೊಡ್ಡಹಾಗಡೆ ಶಂಕರ್, ದಿನ್ನೂರು ರಾಜು, ನರಸಿಂಹರೆಡ್ಡಿ ಇದ್ದರು.
ಸದ್ಬಳಕೆಯಾಗದ ₹900 ಕೋಟಿ
₹900 ಕೋಟಿ ಯಾವುದೇಕ್ಕೆ ಬಳಸಿದ್ದೀರಾ?: ‘2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೊದಲು ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೆ. ನಾನು ಸೋಲುವ ಮೊದಲು ಆನೇಕಲ್ ಯೋಜನಾ ಪ್ರಾಧಿಕಾರದಲ್ಲಿ ₹900ಕೋಟಿ ಹಣ ಇತ್ತು. ಈ ಹಣವನ್ನು ಯಾವೆಲ್ಲಾ ಯೋಜನೆಗಳಿಗೆ ಬಳಸಿದ್ದಾರೆ ಎಂಬುದು ತಿಳಿದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ₹900ಕೋಟಿ ಹಣವನ್ನು ನವ ಆನೇಕಲ್ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಭವಿಷ್ಯದ ಆನೇಕಲ್ಗಾಗಿ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಕೆರೆ ಅಭಿವೃದ್ಧಿ ಸ್ಮಶಾನ ಚರಂಡಿ ಕೆಲಸಗಳನ್ನು ಮಾಡಿದ್ದಾರೆ. ಈ ಹಣವನ್ನು ಆನೇಕಲ್ಗೆ ಹೊಸ ರೂಪ ನೀಡಲು ಮೀಸಲಿಡಬೇಕಾಗಿತ್ತು. ಆದರೆ ಈ ಹಣ ಸರಿಯಾಗಿ ವಿನಿಯೋಗವಾಗಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.