ADVERTISEMENT

ಅಂಗವಿಕಲರ ಶಾಲೆ ತೆರೆಯಲು ಆಗ್ರಹ

ದೊಡ್ಡಬಳ್ಳಾಪುರ: ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:21 IST
Last Updated 28 ಜನವರಿ 2023, 6:21 IST
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ವಾರ್ಷಿಕೋತ್ಸವದ ಅಂಗವಾಗಿ ಅಂಗವಿಕಲರ ಮಕ್ಕಳಿಗೆ ಪಠ್ಯ ಮತ್ತು ಕ್ರೀಡಾ ಸಾಮಗ್ರಿ ವಿತರಿಸಲಾಯಿತು
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ವಾರ್ಷಿಕೋತ್ಸವದ ಅಂಗವಾಗಿ ಅಂಗವಿಕಲರ ಮಕ್ಕಳಿಗೆ ಪಠ್ಯ ಮತ್ತು ಕ್ರೀಡಾ ಸಾಮಗ್ರಿ ವಿತರಿಸಲಾಯಿತು   

ದೊಡ್ಡಬಳ್ಳಾಪುರ: ನಗರದಲ್ಲಿ ಸುಸಜ್ಜಿತವಾದ ಅಂಗವಿಕಲರ ಸರ್ಕಾರಿ ಶಾಲೆ ಪ್ರಾರಂಭಿಸುವ ಅಗತ್ಯವಿದೆ. ಇದರಿಂದ ನೂರಾರು ಜನ ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಹೇಳಿದರು.

ಅವರು ನಗರದ ಕನ್ನಡ ಜಾಗೃತ ಭವನದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ವಾರ್ಷಿಕೋತ್ಸವದ ಅಂಗವಾಗಿ ಅಂಗವಿಕಲರ ಮಕ್ಕಳಿಗೆ ಪಠ್ಯ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಪ್ರವೇಶ ಕೊರತೆಯಿಂದ ಸರ್ಕಾರಿ ಶಾಲೆಯೊಂದನ್ನು ಗುರುತಿಸಿ ಅಂಗವಿಕಲರ ಶಾಲೆಯನ್ನು ಪ್ರಾರಂಭಿಸಿದರೆ ನೂರಾರು ಜನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ನಮ್ಮ ಸಂವಿಧಾನದಲ್ಲಿ ಅಂಗವಿಕಲರಿಗೂ ಸಮನ ಅವಕಾಶ, ಸಮಾನ ಮತದಾನದ ಹಕ್ಕು ನೀಡಿದೆ. ಇವುಗಳ ಬಳಕೆಯಾಗಬೇಕಾದರೆ ಅಂಗವಿಕಲರು ವಿದ್ಯಾವಂತರಾಗಬೇಕು. ಕಲಿಗೆ ಪೂರಕವಾದ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.

ADVERTISEMENT

ಕನ್ನಡಪರ ಸಂಘಟನೆಗಳು ತಮ್ಮ ಕಾರ್ಯಕರ್ತರನ್ನು ಬೌದ್ಧಿಕವಾಗಿ ಬೆಳೆಸಬೇಕಾಗಿದೆ. ಇದಕ್ಕಾಗಿ ಕಾರ್ಯಕರ್ತರಿಗೆ ಶಿಬಿರಗಳನ್ನು ನಡೆಸಿ ಕಾಲ ಕಾಲಕ್ಕೆ ಪುನಶ್ಚೇತನಗೊಳಿಸುವ ಕೆಲಸವು ಸಂಘಟನೆಯಲ್ಲಿ ಆಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಸಂಘಟನೆಗಳು ವಾಣಿಜ್ಯೀಕರಣಗೊಳ್ಳಬಾರದು. ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆಯನ್ನು ಯಶಸ್ವಿಗೊಳಿಸುವ ಕಡೆಗೆ ಗಮನ ನೀಡಬೇಕೆಂದರು.

ಆಕಾಶವಾಣಿ ಜಿಲ್ಲಾ ವರದಿಗಾರ ಡಿ.ಶ್ರೀಕಾಂತ್ ಮಾತನಾಡಿ, ಅಂಗವಿಕಲರು ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಬಗ್ಗೆ ಅನುಕಂಪಪಡುವ ಬದಲು ಅವರಿಗೆ ಅವಕಾಶ ನೀಡಬೇಕು ಎಂದರು.

ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿಮಾವಿನಕುಂಟೆ ಮಾತನಾಡಿ, ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸಾಮಾಜಿಕ ಜವಾಬ್ದಾರಿ ಮುಖ್ಯವೆಂದು ಅರಿಯಬೇಕು. ಸಮಾಜದ ಋಣವನ್ನು ತೀರಿಸಲು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜು, ರಾಜ್ಯಾಧ್ಯಕ್ಷ ಎಸ್.ಎನ್.ಸುಬ್ರಮಣಿ, ತಾಲ್ಲೂಕು ಅಧ್ಯಕ್ಷ ಡಿ.ಶ್ರೀರಾಮ್, ತಾಲ್ಲೂಕು ಕಾರ್ಯಾಧ್ಯಕ್ಷ ಜಿ.ಪುರುಷೋತ್ತಮ್, ಕಾರ್ಮಿಕ ಘಟಕದ ಅಧ್ಯಕ್ಷ ಎ.ಆನಂದಕುಮಾರ್, ನಗರ ಘಟಕದ ಅಧ್ಯಕ್ಷ ಡಾ.ಸುನೀಲ್‌ಕುಮಾರ್, ಕದಿರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.