ಬಾಶೆಟ್ಟಿಹಳ್ಳಿ (ದೊಡ್ಡಬಳ್ಳಾಪುರ): ಬೇಸಿಗೆ ಶಿಬಿರದ ಅವಶ್ಯಕತೆ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಇದೆ. ಎಲ್ಲಾ ಮಕ್ಕಳು ಮನರಂಜನಾ ಚಟುವಟಿಕೆಗಳ ಮೂಲಕ ಕಲಿಯುವುದು ಸಾಕಷ್ಟು ಇದೆ ಎಂದು ಬಾಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ ಹೇಳಿದರು.
ಶಿಕ್ಷಣ ಫೌಂಡೇಶನ್ ವತಿಯಿಂದ ಎಳ್ಳುಪುರ ಗ್ರಾಮದಲ್ಲಿ ನಡೆದ ಒಂದು ತಿಂಗಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಬೇಸಿಗೆ ಶಿಬಿರ ನಡೆಸಲು ಅಗತ್ಯ ನೆರವು ನೀಡಲಾಗುವುದು ಎಂದರು.
ಶಿಕ್ಷಣ ಫೌಂಡೇಶನ್ ಸಂಯೋಜಕ ಗಂಗಾಧರ್ ಮಾತನಾಡಿ, ‘ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಈ ಬಾರಿ ಶಿಬಿರದಲ್ಲಿ ರೀಡ್ ಎನ್ನುವ ವಿನೂತನ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದೇವೆ. ಇದರಿಂದ ಮಕ್ಕಳು ಇಂಗ್ಲಿಷ್ ಕಲಿಯಲು ಸಹಾಯವಾಗಿದೆ. ಕಲಿಕೆಗೆ ಪೂರಕವಾದ ಪಠ್ಯದಿಂದ ಹೊರತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು’ ಎಂದರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲ ಶಾಲಾ ಮಕ್ಕಳಿಗೂ ಪಂಚಾಯಿತಿ ವತಿಯಿಂದ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು. ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿಲ್ಪ ಮುನಿಶಂಕರಯ್ಯ, ಗ್ರಾಮ ಪಂಚಾಯತಿ ಸದಸ್ಯೆ ಸರಸ್ವತಿ, ಮುನಿರತ್ನಮ್ಮ, ಮುಖಂಡರಾದ ಚೆನ್ನೆಗೌಡ, ಶಿಕ್ಷಣ ಪೌಂಡೆಶನ್ ಸಹ ಸಂಯೋಜಕ ಎಂ.ನಾರಾಯಣಸ್ವಾಮಿ, ಕುಮಾರನಾಯ್ಕ್, ಫೌಜಿಯಾ, ಪವಿತ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.