ತೂಬಗೆರೆ (ದೊಡ್ಡಬಳ್ಳಾಪುರ) ತಾಲ್ಲೂಕಿನ ತೂಬಗೆರೆಯಲ್ಲಿ ಏಕಾದಶಿ ಹಬ್ಬದ ಅಂಗವಾಗಿ ಬುದವಾರ ಭೂತ ನೆರಿಗೆ ಹಬ್ಬ ಆಚರಿಸಲಾಯಿತು.
ಹುಟ್ಟುಲು ಗೋಪುರದ ಬಳಿಯಿಂದ ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತಗಳ ಆರ್ಭಟ ಗ್ರಾಮದ ವಿವಿಧೆಡೆ ಸಂಚರಿಸಿ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಮುಕ್ತಾಯವಾಯಿತು. ಕೆಂಚಣ್ಣ ವೇಷಧಾರಿಯಾಗಿ ತೇರಿನ ಬೀದಿಯ ವೆಂಕಟೇಶ್, ಕರಿಯಣ್ಣ ವೇಷಧಾರಿಯಾಗಿ ಶೇಖರ್ ವೇಷ ಧರಿಸಿದ್ದರು.
ತೂಬಗೆರೆ ಗ್ರಾಮದಲ್ಲಿನ ನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡು ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ, ಪೂಜಾರಯ್ಯ ಆನಂದ್ ಅವರ ಮಂತ್ರಪಠಣದೊಂದಿಗೆ ಕೆರಳಿದ ಭೂತಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು.
ಗ್ರಾಮದಲ್ಲಿ ಈ ಭೂತ ವೇಷಧಾರಣೆ ಮಾಡಿಕೊಂಡು ಸಂಚರಿಸುವುದರಿಂದ ಗ್ರಾಮದಲ್ಲಿ ಯಾವುದೇ ಭೂತ-ಪಿಶಾಚಿಗಳು ಸುಳಿಯುವುದಿಲ್ಲ ಎನ್ನುವ ನಂಬಿಕೆ ಜನರದ್ದು. ಕೆಲವು ಭಕ್ತರು ಬಾಳೆಹಣ್ಣು ಮತ್ತು ತೂಬಗೆರೆ ಗ್ರಾಮದ ವಿಶೇಷ ರೀತಿಯ ಹಲಸಿನ ಹಣ್ಣಿನ ರಸಾಯನ ತಯಾರಿಸಿ ವೇಷಧಾರಿಗಳು ಬಂದಾಗ ನೀಡುತ್ತಾರೆ. ಅಲ್ಲದೆ ಕೆಲ ಭಕ್ತರು ಕೋಳಿಗಳನ್ನು ನೀಡುತ್ತಾರೆ. ಭೂತಗಳನ್ನು ಶಾಂತಗೊಳಿಸಲು ರಸಾಯನ ತಿನ್ನಿಸಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.