
ಬೆಂಗಳೂರು/ಆನೇಕಲ್: ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ಶನಿವಾರ ರಾತ್ರಿ ನಡೆದಿದೆ.
ಅಪಹರಣ ಹಾಗೂ ಜೋಡಿ ಕೊಲೆ ಪ್ರಕರಣದ ಆರೋಪಿ ಆಂಧ್ರಪ್ರದೇಶದ ರವಿ ಪ್ರಸಾದ್ ರೆಡ್ಡಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ
ದಾಖಲಿಸಲಾಗಿದೆ.
ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ್ ಎಂಬುವರ ಕೊಲೆ ಪ್ರಕರಣ ಸಂಬಂಧ ರವಿ ಪ್ರಸಾದ್ ರೆಡ್ಡಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಸ್ಥಳ ಮಹಜರಿಗೆ
ಪೊಲೀಸರು ಕರೆದೊಯ್ದಿದ್ದ ವೇಳೆ ಆರೋಪಿ, ಹೆಡ್ ಕಾನ್ಸ್ಟೆಬಲ್ ಅಶೋಕ್ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ, ಶರಣಾಗತಿಗೆ ಎಚ್ಚರಿಕೆ ನೀಡಿದರೂ ಕೇಳದಿದ್ದಾಗ ಇನ್ಸ್ಪೆಕ್ಟರ್ ಸೋಮಶೇಖರ್, ಆರೋಪಿಯ ಕಾಲಿಗೆ ಗುಂಡು ಹೊಡೆದು
ಬಂಧಿಸಿದ್ದಾರೆ.
ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 6ರಂದು ಆರೋಪಿಯು ಹೆಬ್ಬಗೋಡಿ ಉದ್ಯಮಿ ಬಾಲಪ್ಪ ರೆಡ್ಡಿ ಅವರನ್ನು ಅಪಹರಿಸಿ ಹಣಕ್ಕಾಗಿ ಕುತ್ತಿಗೆ ಸೀಳಿ ಕೊಂದಿದ್ದ. ನವೆಂಬರ್ 4ರಂದು ಕಿತ್ತಗಾನಹಳ್ಳಿಯ ಮನೆಯಲ್ಲಿ ಮಾದೇಶ್ ಕೊಲೆ ನಡೆದಿತ್ತು. ಈ ಎರಡೂ ಕೊಲೆ ಪ್ರಕರಣ ಸಂಬಂಧ ತಾಂತ್ರಿಕ ಸಾಕ್ಷ್ಯ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಆಂಧ್ರಪ್ರದೇಶದ ರವಿಪ್ರಸಾದ್ ರೆಡ್ಡಿ ಕಳೆದ 10 ವರ್ಷದಿಂದ ಹೆಬ್ಬಗೋಡಿಯಲ್ಲಿ ವಾಸವಿದ್ದು ಉದ್ಯಮದಲ್ಲಿ ನಷ್ಟವಾದ ನಂತರ ತರಕಾರಿ ಅಂಗಡಿ ನಡೆಸುತ್ತಿದ್ದರು. ವೇಗವಾಗಿ ಶ್ರೀಮಂತನಾಗಲು ಶ್ರೀಮಂತರನ್ನು ಅಪಹರಣ ಮಾಡಲು ಮುಂದಾಗಿದ್ದ. ಉದ್ಯಮಿ ಬಾಲಪ್ಪರೆಡ್ಡಿಯನ್ನು ಜಿಗಣಿ ರಿಂಗ್ ರಸ್ತೆಯಲ್ಲಿ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದಾಗ ಬಾಲಪ್ಪರೆಡ್ಡಿಯನ್ನು ಕೊಲೆ ಮಾಡಿ ತಮಿಳುನಾಡಿನ ಶಾನುಮಾವು ಕಾಡಿನಲ್ಲಿ ಮೃತದೇಹವನ್ನು ಎಸೆದಿದ್ದ. ನವೆಂಬರ್ 4ರಂದು ಪ್ರಾವಿಜನ್ ಸ್ಟೋರ್ ಮಾಲೀಕ ಮಾದೇಶ್ ಅವರನನ್ನು ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಚನಾಯಕನಹಳ್ಳಿಯಲ್ಲಿ ಕತ್ತು ಕೊಯ್ದು ಕೊಲೆ ಮಾಡಿದ್ದ. ಮಾದೇಶ್ ಕೊಲೆಯ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.