ADVERTISEMENT

ಪುರಸಭಾ ಚುನಾವಣೆ ಬಿಎಸ್ಪಿ ಏಕಾಂಗಿ ಸ್ಪರ್ಧೆ

ಪಕ್ಷದ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ನಿರ್ಧಾರ– ನರಗುಂದ ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 8 ಮೇ 2019, 13:05 IST
Last Updated 8 ಮೇ 2019, 13:05 IST
ಪತ್ರಿಕಾ ಗೋಷ್ಠಿಯಲ್ಲಿ ಬಿ.ಎಸ್.ಪಿ.ಮುಖಂಡರು.
ಪತ್ರಿಕಾ ಗೋಷ್ಠಿಯಲ್ಲಿ ಬಿ.ಎಸ್.ಪಿ.ಮುಖಂಡರು.   

ದೇವನಹಳ್ಳಿ: ಪುರಸಭೆ ಚುನಾವಣೆ ಮೇ 29ರಂದು ನಡೆಯಲಿದ್ದು, ಬಿ.ಎಸ್.ಪಿ.ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿ.ಎಸ್.ಪಿ. ಜಿಲ್ಲಾ ಸಂಚಾಲಕ ನಂದಗುಂದ ವೆಂಕಟೇಶ್ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಪಿ.ರಾಜ್ಯ ಕಾರ್ಯಕಾರಿ ಸಮಿತಿ ಆದೇಶದ ಮೇರೆಗೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲಾಗಿತ್ತು, ಪ್ರಸ್ತುತ ಪುರಸಭೆಯ 23 ವಾರ್ಡ್‌ಗಳಲ್ಲಿರುವ ಮಿಸಲಾತಿ ಅನ್ವಯ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಮಾನಾಂತರ ಎದುರಾಳಿಗಳು, ಪಕ್ಷದ ಭವಿಷ್ಯದ ದೃಷ್ಟಿಯಿಂದ ಏಕಾಂಗಿ ಸ್ಪರ್ಧೆ ಅನಿವಾರ್ಯವಾಗಿದೆ ಎಂದರು.

ADVERTISEMENT

ಪಕ್ಷದ ಸ್ಥಳೀಯ ಮುಖಂಡ ಡಿ.ಆರ್.ನಾರಾಯಣಸ್ವಾಮಿ ಮಾತನಾಡಿ, 23 ವಾರ್ಡ್‌ಗಳಲ್ಲಿ ಇದೇ ಮೊದಲ ಬಾರಿಗೆ ಅಭ್ಯರ್ಥಿಯನ್ನು ಬಿ.ಎಸ್.ಪಿ ವತಿಯಿಂದ ಕಣಕ್ಕಿಳಿಸಲಾಗುತ್ತಿದೆ. ಐತಿಹಾಸಿಕ ಸ್ಥಳವಾಗಿರುವ ದೇವನಹಳ್ಳಿ ನಗರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ಆಡಳಿತ ನಡೆಸಿಯೂ 25 ವರ್ಷಗಳಲ್ಲಿ ಕಿಂಚಿತ್ತು ಅಭಿವೃದ್ಧಿಯಾಗಿಲ್ಲ. ಸ್ಥಳೀಯರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪುರಸಭೆ ಆಡಳಿತದಲ್ಲಿ ವಿರೋಧ ಪಕ್ಷವೇ ಇಲ್ಲವೆಂದ ಮೇಲೆ ಸಮಸ್ಯೆಗಳನ್ನು ಎತ್ತಿ ಹಿಡಿಯುವವರು ಯಾರು ಎಂದು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಮುನಿಕೃಷ್ಣ ಹಾಗೂ ಖಜಾಂಚಿ ನರಸಿಂಹರಾಜು ಮಾತನಾಡಿ, ದೇವನಹಳ್ಳಿ ತಾಲ್ಲೂಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೂ, ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಒಂದು ಆಧುನಿಕ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ಪ್ರಯಾಣಿಕರಿಗೆ ತಂಗುದಾಣವಿಲ್ಲ. ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪರಿಸರ ಸಂರಕ್ಷಣೆ ಕೆಲಸವಾಗಿಲ್ಲ.ಕುಡಿಯುವ ನೀರಿಗೆ ಶಾಶ್ವತ ಯೋಜನೆ ಇಲ್ಲ ಎಂದು ದೂರಿದರು.

ಪುರಸಭೆ ಅಸ್ತಿತ್ವಕ್ಕೆ ಬಂದು ಅರ್ಧ ಶತಮಾನ ಕಳೆದರೂ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಪಕ್ಷವು ಇಲ್ಲಿ ಆಡಳಿತ ಚುಕ್ಕಾಣಿ ಹಿಡಿದರೆ ಮಾದರಿ ಪುರಸಭೆಯನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.

ಮುಖಂಡರಾದ ಸಿ.ಮುನಿಯಪ್ಪ ಮತ್ತು ಬಂಗಾರಪ್ಪ ಮಾತನಾಡಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಾಜಣ್ಣ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ರಮಾದೇವಿ, ಮುಖಂಡರಾದ ಪೂಜಪ್ಪ, ಕಾಶಿನಾಥ್, ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.