ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಬಿಎಸ್‌‍ಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 2:39 IST
Last Updated 4 ಮಾರ್ಚ್ 2021, 2:39 IST
ಈರಣ್ಣ ಜಿ. ಮೌರ್ಯ
ಈರಣ್ಣ ಜಿ. ಮೌರ್ಯ   

ವಿಜಯಪುರ: ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾಗಿ ಕೆಲಸ ಮಾಡುವುದರ ಜೊತೆಗೆ ಕಾರ್ಪೋರೇಟ್ ಕಂಪನಿಗಳ ಏಜೆಂಟಿನಂತೆ ಕೆಲಸ ಮಾಡುತ್ತಿದೆ. ಇದರಿಂದ ಭವಿಷ್ಯದಲ್ಲಿ ದೇಶಕ್ಕೆ ಮಾರಕವಾಗಲಿದೆ ಎಂದು ಬಿಎಸ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಈರಣ್ಣ ಜಿ. ಮೌರ್ಯ ವಾಗ್ದಾಳಿ ನಡೆಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ದೇಶದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೇ ತನ್ನ ಮೂಲ ಅಜೆಂಡಾವನ್ನು ನೆರವೇರಿಸಿಕೊಳ್ಳಲು ಹೊರಟಿದೆ. ಸಂವಿಧಾನದಿಂದ ಹಿಡಿದು ಈ ದೇಶದ ಜನಸಾಮಾನ್ಯರ ಬೆನ್ನುಮೂಳೆ ಮುರಿಯುವಂತಹ ಸಾಹಸಕ್ಕೆ ಕೈಹಾಕಿದೆ. ದೇಶದ ಬೆನ್ನೆಲುಬಾದ ರೈತರು ಬೀದಿಗೆ ಬಂದಿದ್ದಾರೆ. ನೋಟು ಅಮಾನೀಕರಣ ಮಾಡಿದ ನಂತರ ಕಪ್ಪುಹಣ ದೇಶಕ್ಕೆ ವಾಪಸಾಗಲಿದೆ ಎಂದು ದೇಶದ ಜನರು ಬಯಸಿದ್ದರು. ಅದು ನೆರವೇರುವ ಬದಲಿಗೆ ಅಕ್ರಮವಾಗಿ ಸಂಪಾದನೆ ಮಾಡಿಕೊಂಡಿರುವ ಕಪ್ಪುಹಣವನ್ನು ಭದ್ರಪಡಿಸಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಟೀಕಿಸಿದರು.

ಜಿಎಸ್‌ಟಿ ಜಾರಿಯಾದ ನಂತರ ಸಣ್ಣ ಉದ್ದಿಮೆದಾರರು, ವ್ಯಾಪಾರಸ್ಥರು ಬೀದಿಗೆ ಬಂದಿದ್ದಾರೆ ಎಂದು ದೂರಿದರು.

ADVERTISEMENT

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ಮಾಡುತ್ತಿರುವ ರೈತರನ್ನು ದಿಕ್ಕುತಪ್ಪಿಸಲು ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿದರೆ ದೇಶದ್ರೋಹಿ ಪಟ್ಟ ಕಟ್ಟಿ ಕೇಸುಗಳು ಹಾಕುತ್ತಾರೆ. ಇದು ಈ ಸರ್ಕಾರಗಳ ದೌರ್ಬಲ್ಯವಾಗಿದೆ. ಜನರ ಧ್ವನಿಯನ್ನು ಅಡಗಿಸುತ್ತಿರುವುದು ಸಂವಿಧಾನಬಾಹಿರ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.