ದೊಡ್ಡಬಳ್ಳಾಪುರ: 2018ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ದದ ದೌರ್ಜನ್ಯ ತಡೆ ತಿದ್ದುಪಡಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಮೀಸಲಾತಿ ಅವಕಾಶದ ವಿಚಾರದಲ್ಲಿ ನೀಡಿರುವ ತೀರ್ಪು ಮಾರಕವಾಗಲಿದೆ ಎಂದು ಬಹುಜನ ಸಮಾಜವಾದಿ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಹೇಳಿದರು.
ನಗರದ ಬಹುಜನ ಸಮಾಜವಾದಿ ಪಾರ್ಟಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ‘ಸಮಾಜದಲ್ಲಿನ ತಾರತಮ್ಯ ನಿವಾರಣೆಗೆ ಈ ತೀರ್ಪು ಕೊಡಲಿಪೆಟ್ಟು ನೀಡಲಿದೆ. ಅಲ್ಲದೆ ಎಸ್.ಸಿ.ಎಸ್.ಟಿ ದೌರ್ಜನ್ಯ ತಡೆ ಕಾನೂನನ್ನು ದುರ್ಬಲಗೊಳಿಸುತ್ತದೆ. ಸಂವಿಧಾನದ ಮೂಲ ಉದ್ದೇಶಕ್ಕೆ ದಕ್ಕೆ ಉಂಟಾಗಲಿದೆ. ರಾಜ್ಯದ ಜವಾಬ್ದಾರಿಗೆ ನೀಡಿರುವುದು ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಅಳವಡಿಸದೆ ಹೋದಲ್ಲಿ ದಲಿತರ ಪರಿಸ್ಥಿತಿ ಶೋಚನೀಯವಾಗಲಿದೆ’ ಎಂದರು.
‘ಈಗಾಗಲೆ ಮನುವಾದಿಗಳ ನೀತಿ ಅಳವಡಿಸುವುದೇ ಉದ್ದೇಶವಾಗಿಸಿಕೊಂಡು ಮೀಸಲಾತಿಯನ್ನೇ ತೆರವುಗೊಳಿಸುವ ಮಾತನಾಡುತ್ತಿರುವವರಿಗೆ ಈ ತೀರ್ಪು ಅಸ್ತ್ರವಾಗಲಿದೆ. ಬಿಜೆಪಿ ಸರ್ಕಾರದ ಹುನ್ನಾರದಿಂದಲೇ ನ್ಯಾಯಾಧೀಶರಿಗೆ ಸಂವಿಧಾನದ ಮೂಲ ಉದ್ದೇಶವನ್ನು ಸರ್ಕಾರದ ಪರ ವಕೀಲರು ತರದೇ ಈ ತೀರ್ಪು ಬರಲು ಕಾರಣ ಎಂಬ ಅನುಮಾನವಿದ್ದು, ಬಿಎಸ್ಪಿ ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸುತ್ತದೆ’ ಎಂದರು.
ಈ ವೇಳೆ ವಿಧಾನಸಭೆ ಚುನಾವಣೆ ಉಸ್ತುವಾರಿ ಕೆ.ವಿ.ಮುನಿಯಪ್ಪ, ಕಾರ್ಯದರ್ಶಿ ದಾಳಪ್ಪ, ಮುಖಂಡರಾದ ಆಂಜಿನಪ್ಪ, ನರೇಂದ್ರಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.