ADVERTISEMENT

ದೇಶದ್ರೋಹಿ ಘೋಷಣೆ ಕೂಗುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಹಳೆ ಬಸ್ ನಿಲ್ದಾಣದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:45 IST
Last Updated 21 ಫೆಬ್ರುವರಿ 2020, 19:45 IST
ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು
ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ:‘ದೇಶ ವಿರೋಧಿ ಘೋಷಣೆ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಸದ್ದಡಗಿಸಲು ಕೇಂದ್ರ ಸರ್ಕಾರ ತ್ವರಿತವಾಗಿ ಕಠಿಣ ಕಾನೂನು ರೂಪಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಆಗ್ರಹಿಸಿದರು.

ಪಾಕಿಸ್ತಾನದ ಪರ ಘೋಷಣೆ ಕೂಗುವವರ ಗಡಿಪಾರಿಗೆ ಒತ್ತಾಯಿಸಿ ನಗರದ ಹಳೆ ಬಸ್ ನಿಲ್ದಾಣದಲ್ಲಿನ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ವಿವಿಧ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

‘ಸಿಎಎ ವಿರೋಧ, ಕಾಶ್ಮೀರ ವಿಚಾರ ಕುರಿತಂತೆ ಕೇಂದ್ರ ಸರ್ಕಾರವನ್ನು ದೂಷಿಸುವ ನೆಪದಲ್ಲಿ ಪಾಕಿಸ್ತಾನ ಪ್ರೇರಿತವಾಗಿ ಕೆಲ ಬುದ್ಧಿಜೀವಿಗಳು ಯುವ ಸಮುದಾಯವನ್ನು ದೇಶದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಅಲ್ಲದೆ ದೇಶ ವಿರೋಧಿ ಚಟುವಟಿಕೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿರುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ’ ಎಂದರು.

ADVERTISEMENT

‘ಹುಬ್ಬಳಿಯಲ್ಲಿ ಯುವಕರ ಗುಂಪೊಂದು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಬೆಂಗಳೂರಿನಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನಾ ಎಂಬ ಯುವತಿ ಬಹಿರಂಗವಾಗಿಯೇ ಪಾಕಿಸ್ತಾನ ಜಿಂದಾಬಾದ್ ಎಂದಿರುವುದು ದೇಶ ವಿರೋಧಿ ಮನಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಅರಿವಾಗುತ್ತಿದೆ. ಕಾನೂನಿನಲ್ಲಿ ದೇಶ ವಿರೋಧಿ ಕಾರ್ಯಕ್ಕೆ ಕಠಿಣ ಕ್ರಮ ಇಲ್ಲ ಎಂಬ ಅಸಡ್ಡೆ ಇಂತಹ ಘಟನೆಗಳು ಮರುಕಳಿಸಲು ಕಾರಣ. ಈ ಕುರಿತು ಕೆಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಿ, ತ್ವರಿತವಾಗಿ ಕಠಿಣ ಕಾನೂನು ರೂಪಿಸಿ ದೇಶ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಬೇಕು’ ಎಂದರು.

ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್‌ ನಾಯಕ್ ಮಾತನಾಡಿ, ‘ಬಹು ವರ್ಷಗಳ ಮಹದಾಯಿ, ಕಳಸಾ ಬಂಡೂರಿ ನಾಲೆ ನಿರ್ಮಾಣ ಕುರಿತಂತೆ ನಡೆದ ಹೋರಾಟಕ್ಕೆ ನ್ಯಾಯಾಲಯ ಅಧಿಸೂಚನೆ ನಿರ್ದೇಶನ ನೀಡಿರುವ ಮೂಲಕ ಗೆಲುವನ್ನು ನೀಡಿದೆ. ಇದಕ್ಕೆ ನಾವೆಲ್ಲರು ಸಂಭ್ರಮಾಚರಣೆ ಮಾಡಬೇಕಿತ್ತು. ಆದರೆ ವಿಪರ್ಯಾಸ, ದೇಶ ವಿರೋಧಿಗಳ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದೆ. ಸಿಎಎ ವಿರುದ್ಧದ ಹೋರಾಟದ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಜಯಕಾರ ಹಾಕುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವಂತಾಗಿದೆ. ಇಂತಹ ದೇಶ ವಿರೋಧಿ ಮನಸ್ಥಿತಿ ಉಳ್ಳವರ ಗಡಿಪಾರು ಮಾಡಬೇಕು’ ಎಂದರು.

ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಅಂಜನೇಯ, ನಗರ ಉಪಾಧ್ಯಕ್ಷ ವಿ.ಪರಮೇಶ್, ಶಿವರಾಜ್‍ ಕುಮಾರ್ ಸೇವಾ ಸಮಿತಿ ಅಧ್ಯಕ್ಷ ರಮೇಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ, ಕರವೇ (ಪ್ರವಿಣ್ ಶೆಟ್ಟಿ ಬಣ) ಕಾನೂನು ಘಟಕದ ಅಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಅಧ್ಯಕ್ಷ ರಮೇಶ್‍ ವಿರಾಜ್, ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್ ವೇಣು, ಗೌರವ ಅಧ್ಯಕ್ಷ ಪು.ಮಹೇಶ್, ನಗರ ಅಧ್ಯಕ್ಷ ಶ್ರೀನಗರ ಬಷೀರ್, ಶಿವರಾಜ್ ಕುಮಾರ್ ಸೇನಾಸಮಿತಿ ಕಾರ್ಯದರ್ಶಿ ಗುರುರಾಜ್, ಕನ್ನಡ ಪಕ್ಷದ ನಗರ ಕಾರ್ಯದರ್ಶಿ ವೆಂಕಟೇಶ್, ಸಂಚಾಲಕ ಪ್ರಕಾಶ್‌ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.