ಆನೇಕಲ್: ‘ದೇಶದ ಬೆನ್ನೆಲುಬು ರೈತ. ರೈತರಿಗೆ ಬೆನ್ನೆಲುಬು ರೈತ ಮಹಿಳೆ. ಹಾಗಾಗಿ ಕೃಷಿ ಕ್ಷೇತ್ರದಲ್ಲಿ ಬಿತ್ತನೆಯಿಂದ ಒಕ್ಕಣೆಯವರೆಗೂ ಮಹಿಳೆಯ ಪಾಲ್ಗೊಳ್ಳುವಿಕೆಯಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ತಿಳಿಸಿದರು.
ತಾಲ್ಲೂಕಿನ ಸರ್ಜಾಪುರ ಸಮೀಪದ ಬಿ. ಹೊಸಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಕೃಷಿ ಚಟುವಟಿಕೆಗಳೊಂದಿಗೆ ದೈನಂದಿನ ಚಟುವಟಿಕೆಗಳಾದ ಅಡುಗೆ ತಯಾರಿಕೆ, ಮಕ್ಕಳ ಲಾಲನೆ ಪಾಲನೆ, ದನ– ಕರುಗಳ ಪೋಷಣೆ ಮಾಡುತ್ತಾರೆ. ಬಹುಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕೃಷಿಗೆ ಜೀವಾಳವಾಗಿದ್ದಾರೆ. ಶೇಕಡ 74ರಷ್ಟು ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಇದೆ. ಕೆಲಸದ ಜೊತೆಗೆ ಮಹಿಳೆಯರು ಆರೋಗ್ಯ, ಪೌಷ್ಟಿಕ ಆಹಾರ ಸೇವನೆಯ ಕಡೆಗೂ ಗಮನಹರಿಸಬೇಕು ಎಂದರು.
ಕೃಷಿ ಅಧಿಕಾರಿ ಶಕುಂತಲಾ ಬಿರಾದರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿ ಶ್ರೀನಿವಾಸನ್, ಕೃಷಿ ಇಲಾಖೆಯ ಆತ್ಮ ವಿಭಾಗದ ತಾಂತ್ರಿಕ ಅಧಿಕಾರಿ ಚಂದ್ರಕಲಾ, ಪ್ರಗತಿಪರ ರೈತರಾದ ಜಯಶಂಕರ್, ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.