ದೇವನಹಳ್ಳಿ: ರಾಜ್ಯದಲ್ಲಿ ಸೆ.14ರಿಂದ ಚಲಿಸು ಕರ್ನಾಟಕ ಸೈಕಲ್ ಜಾಥಾ ಆರಂಭವಾಗಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕ ಸಂಘಟನಾ ಕಾರ್ಯದರ್ಶಿ ಗಂಗಾಧರ ಕರಿಕೆರಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋವಿಡ್ 19ರ ಸೋಂಕು ಬೆಳಕಿಗೆ ಬಂದು ಈವರೆಗೆ ಸರ್ಕಾರದ ಅಡಳಿತ ಸ್ತಬ್ದವಾಗಿದೆ. ಕೊರೊನಾ ಸೋಂಕಿನ ಕಡಿವಾಣಕ್ಕೆ ಖರೀದಿಸಿದ ವೈದ್ಯಕೀಯ ಪರಿಕರಗಳಲ್ಲಿ ಭ್ರಷ್ಟಾಚಾರದ ವಾಸನೆ ಇದೆ. ನೆರೆ ಪರಿಹಾರದಲ್ಲಿ ವಿಳಂಬ, ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಆಡಳಿತ ಚಟುವಟಕೆಗಳ ವಾಸ್ತವವನ್ನು ಮತದಾರರಿಗೆ ತಿಳಿಸಲು 2,700 ಕಿ.ಮೀ ಪಕ್ಷದ ಕಾರ್ಯಕರ್ತರಿಂದ ಜಾಥಾ ನಡೆಯಲಿದೆ’ ಎಂದು ಹೇಳಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಠಾರೆಡ್ಡಿ ಅವರ ಮಾರ್ಗದರ್ಶನದ ಅನ್ವಯ ಜಾಥಾ ನಡೆಸಲಾಗುತ್ತಿದೆ. ‘ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿದ್ದ ಜೆಡಿಎಸ್, ಎಲ್ಲಾ ಪಕ್ಷಗಳ ಸಿದ್ಧಾಂತ ಒಂದೇ ಆಗಿರುವುದರಿಂದ ಆ ಪಕ್ಷಗಳಲ್ಲಿ ವಿಶೇಷತೆ ಇಲ್ಲ. ಮೂರು ಪಕ್ಷಗಳು ಲೂಟಿ ಹೊಡೆಯಲು ಅವಕಾಶವನ್ನು ಬಳಸಿಕೊಳ್ಳುತ್ತಿವೆ’ ಎಂದು ಆರೋಪಿಸಿದರು.
‘ಪ್ರತಿಯೊಂದು ಚುನಾವಣೆಯಲ್ಲಿ ಹಣ ಹೆಂಡದಿಂದ ಗೆಲುವು ಸಾಧಿಸಲಾಗುತ್ತಿದೆ. ಪಕ್ಷಗಳು ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಬುಡಮೇಲು ಆಗುತ್ತಿದೆ. ಯುವ ಸಮುದಾಯ ಜಾಗೃತಿಗೊಳ್ಳದಿದ್ದರೆ ದೇಶದ ಭವಿಷ್ಯ ಅಧಃಪತನಕ್ಕೆ ಕಾರಣವಾಗಲಿದೆ’ ಎಂದು ಹೇಳಿದರು. ವಿವಿಧ ಘಟಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.