ಹೊಸಕೋಟೆ: ಖಾಸಗಿ ಶಾಲಾ ಮಕ್ಕಳನ್ನು ಹೋಲಿಸಿದರೆ ಸರ್ಕಾರಿ ಶಾಲಾ ಮಕ್ಕಳಲ್ಲಿ ಕ್ರಿಯಾತ್ಮಕ ಆಲೋಚನೆ ಮತ್ತು ಸಾಮಾಜಿಕ ಕಳಕಳಿ ಹೆಚ್ಚಾಗಿರುತ್ತದೆ ಎಂದು ಓವನ್ ಆಸ್ಪತ್ರೆಯ ವೈದ್ಯ ಹಾಗೂ ಯುವ ಸೇನಾ ಸಂಘಟನೆಯ ಮುಖ್ಯಸ್ಥ ಡಾ.ಅಭಿಷೇಕ್ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಓವಂ ಮಕ್ಕಳ ಆಸ್ಪತ್ರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಯುವಸೇನೆ ಸಂಘಟನೆಗಳ ಆಶ್ರಯದಲ್ಲಿ ನಡೆದ ಯುವ 2021ರ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರುಮಾತನಾಡಿದರು.
ಪೋಸ್ಟ್ ಸಂಸ್ಥೆಯ ಎಂಜಿನಿಯರ್ ಮಾಧುರಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಲ್ಲಿ ಉನ್ನತಮಟ್ಟದ ವಿಚಾರಗಳ ಬಗ್ಗೆ ಇರುವ ಆಸಕ್ತಿ ಹಾಗೂ ಸ್ಪರ್ಧಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಇಚ್ಛೆ ನಿಜಕ್ಕೂ ಅದ್ಭುತ. ಸದ್ಯದ ತಂತ್ರಜ್ಞಾನದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ವಿಚಾರ ದೊರೆಯುತ್ತಿವೆ ಎಂದರು.
ಆನ್ಲೈನ್ ಮೂಲಕ ತಾಲ್ಲೂಕಿನ 20 ಪ್ರೌಢಶಾಲೆಯ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ‘ಯುವ ಭಾರತಕ್ಕೆ ನನ್ನ ಕೊಡುಗೆ’ ವಿಷಯವಾಗಿ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ವಿಭಾಗದಲ್ಲಿ ಮೊದಲ ಸ್ಥಾನವನ್ನು ಕುಂಬಳಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಚೈತ್ರಾ, ದ್ವಿತೀಯ ಸ್ಥಾನ, ತಾವರೆಕೆರೆ ಎಸ್ಎಂ ಶಾಲೆಯ ಮೇಘಾ ಹಾಗೂ ಆಂಗ್ಲ ವಿಭಾಗದ ಮೊದಲ ಸ್ಥಾನವನ್ನು ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸನಾ ಎಸ್. ಹುಸೇನ್, ದ್ವಿತೀಯ ಸ್ಥಾನ ವನ್ನು ನಗರದ ಮಿಲೇನಿಯಂ ಶಾಲೆಯ ಲಕ್ಷ್ಮಿ ಶ್ರೀಧರ್ ಪಡೆದರು.
ಎಸ್.ಸಿ. ಮಂಜುನಾಥ್, ಯುವಸೇನೆ ತಂಡದ ವ್ಯವಸ್ಥಾಪಕ ವಿವೇಕ್, ವಿಪ್ರೋ ಸಂಸ್ಥೆಯ ವಿಶ್ವಾಸ್ ಮಧುಸೂದನ್, ಐಬಿಎಂ ಸಂಸ್ಥೆಯ ವಿಕಾಸ ಆರಾಧ್ಯ, ಮುಖ್ಯಶಿಕ್ಷಕಿ ಶುಭಾ ತೀರ್ಪುಗಾರರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.